ಹೆಸರಘಟ್ಟ:ಗ್ರಾಮದಲ್ಲಿರುವ ಹೆರಿಗೆ ಆಸ್ಪತ್ರೆಯನ್ನು ಕೋವಿಡ್ ಆರೈಕೆ ಕೇಂದ್ರವಾಗಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅನುದಾನದಿಂದ 2006ರಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಕಟ್ಟಡ ನಿರ್ಮಿಸಿ ಹದಿನೈದು ವರ್ಷವಾದರೂ ನಾಮಫಲಕ ಹಾಕಿರುವುದು ಬಿಟ್ಟರೆ ಬೇರೆ ಏನು ಕೆಲಸಗಳು ನಡೆದಿಲ್ಲ. ವೈದ್ಯರ ನೇಮಕವಾಗಲಿಲ್ಲ. ಹೆರಿಗೆ ಆಸ್ಪತ್ರೆಗೆ ಬೇಕಾದ ಪರಿಕರಗಳು ಬರಲಿಲ್ಲ. ಗ್ರಾಮಸ್ಥರಿಗೆ ಹೆರಿಗೆ ಕೇಂದ್ರದಿಂದ ಅಗಬಹುದಾಗಿದ್ದ ಯಾವ ಅನುಕೂಲಗಳು ಆಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.
’ಈ ಕಟ್ಟಡವು ಸುಮಾರು ಹತ್ತು ಹಾಸಿಗೆಗಳನ್ನು ಹಾಕುವಷ್ಟು ವಿಶಾಲವಾಗಿದೆ. ಮೂರು ಕೊಠಡಿಗಳು ಇದ್ದು ನೀರು ಮತ್ತು ಶೌಚಾಲಯದ ಅನುಕೂಲವಿದೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಇಲ್ಲೊಂದು ಆರೈಕೆ ಕೇಂದ್ರವನ್ನು ಮಾಡಬಹುದು’ ಎನ್ನುತ್ತಾರೆ ಗ್ರಾಮದ ನಿವಾಸಿ ಹರ್ಷ.
’ದಾಸನೇಹಳ್ಳಿ, ಹುರುಳಿಚಿಕ್ಕನಹಳ್ಳಿ, ಶಿವಕೋಟೆ ಗ್ರಾಮಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಸೋಂಕಿತರನ್ನು 8 ಕಿ.ಮೀ. ದೂರದಲ್ಲಿರುವ ಚಿಕ್ಕಬಾಣಾವರ ಗ್ರಾಮದ ಸಪ್ತಗಿರಿ ಆಸ್ಪತ್ರೆಗೆ ದಾಖಲು ಮಾಡಬೇಕಾಗಿದೆ. ಅದರ ಬದಲು ಇಲ್ಲೇ ಹಾಸಿಗೆಗಳನ್ನು ಹಾಕಿ ಆರೈಕೆ ಕೇಂದ್ರ ಮಾಡಿದರೆ ಅನುಕೂಲವಾಗಲಿದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.