
ದನಗಳ ಜಾತ್ರೆ (ಸಾಂದರ್ಭಿಕ ಚಿತ್ರ)
ಹೆಸರಘಟ್ಟ: ತೋಟಗೆರೆ ಶ್ರೀ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಫೆ.10ರಿಂದ 15ರವರೆಗೆ ದನಗಳ ಜಾತ್ರೆ ನಡೆಯಲಿದೆ ಎಂದು ಸಿಎನ್ಆರ್ ಹಿತಚಿಂತನಾ ಚಾರಿಟಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ವಿ. ರಾಮಸ್ವಾಮಿ ತಿಳಿಸಿದರು.
ಜಾತ್ರೆಯಲ್ಲಿ ರೈತರು ತಮ್ಮ ರಾಸುಗಳನ್ನು ಮಾರಾಟ ಮಾಡಬಹುದು. ಹಳ್ಳಿಕಾರ್, ಅಮೃತ ಮಹಲ್, ಎಚ್ಎಫ್, ಸಿಂಧಿ ಇನ್ನಿತರೆ ವೈವಿಧ್ಯಮಯ ತಳಿಗಳ ರಾಸುಗಳು ಜಾತ್ರೆಯಲ್ಲಿ ಭಾಗವಹಿಸಲಿವೆ. ಉತ್ತಮ ಮಳೆಯಾಗಿರುವುದರಿಂದ ಒಂದು ಸಾವಿರಕ್ಕೂ ಹೆಚ್ಚು ಜಾನುವಾರುಗಳು ಭಾಗವಹಿಸುವ ಸಾಧ್ಯತೆ ಇದೆ ಎಂದರು.
ದೇವಸ್ಥಾನದ ಸುತ್ತಮುತ್ತಲಿನ ಐದು ಎಕರೆ ಜಾಗದಲ್ಲಿ ಜಾನುವಾರುಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ತುಮಕೂರು, ನೆಲಮಂಗಲ, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಗೌರಿಬಿದನೂರು, ದೇವನಹಳ್ಳಿ ತಾಲ್ಲೂಕುಗಳಿಂದ ರೈತರು ಜಾತ್ರೆಗೆ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಜಾತ್ರೆಯಲ್ಲಿ ಭಾಗವಹಿಸುವ ಉತ್ತಮ ರಾಸುಗಳಿಗೆ ಟ್ರಸ್ಟ್ ವತಿಯಿಂದ ಹಲವು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ವಿತರಣೆ ಮಾಡಲಾಗುವುದು. ಜೊತೆಗೆ ಪ್ರತಿ ವರ್ಷದಂತೆ ಜಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲ ರೈತರಿಗೆ ಶಲ್ಯ ವಿತರಣೆ ಮತ್ತು ಎಲ್ಲಾ ರಾಸುಗಳಿಗೆ ಬಾರು ಗೋಲು, ಕೊರಳ ಗೆಜ್ಜೆ, ಕಾಲು ಗೆಜ್ಜೆ, ಶಂಖ, ದಂಡೆ ವಿತರಣೆ ಮಾಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.