ಬೆಂಗಳೂರು: ‘ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಮರಳೂರು ಗ್ರಾಮದ ಸರ್ವೇ ನಂಬರ್ 222ರಲ್ಲಿನ 17 ಎಕರೆ 21 ಗುಂಟೆ ಜಮೀನನ್ನು ನ್ಯಾಯಾಲಯದ ಅನುಮತಿಯಿಲ್ಲದೆ ಯಾರಿಗೂ ಹಂಚಿಕೆ ಮಾಡಬಾರದು’ ಎಂದು ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ಮರಳೂರು ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್ ಸೇರಿದಂತೆ ಐವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್.ಎಸ್. ಓಕಾ ಮತ್ತು ನ್ಯಾಯಮೂರ್ತಿ ಎಚ್ .ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ ಈ ಮಧ್ಯಂತರ ಆದೇಶ ನೀಡಿದೆ.
ಪ್ರತಿವಾದಿಗಳಾದ ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ, ಮೈಸೂರು ಜಿಲ್ಲಾಧಿಕಾರಿ, ಮೈಸೂರು ಉಪ ವಿಭಾಗಾಧಿಕಾರಿ ಮತ್ತು ನಂಜನಗೂಡು ತಾಲ್ಲೂಕು ತಹಶಿಲ್ದಾರ್ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.
ಪ್ರಕರಣವೇನು?: ‘ನಂಜನಗೂಡು ತಾಲ್ಲೂಕಿನ ಗೊದ್ದನಪುರ ಗ್ರಾಮದ ನಿವಾಸಿಗಳಿಗೆ ಆಶ್ರಯ ಮನೆಗಳ ನಿರ್ಮಾಣಕ್ಕಾಗಿ ಮರಳೂರು ಗ್ರಾಮದ ಸರ್ವೇ ನಂಬರ್ 222ರಲ್ಲಿನ 17 ಎಕರೆ 26 ಗುಂಟೆ ಗೋಮಾಳದ ಜಮೀನಿನಲ್ಲಿ ನಿವೇಶನ ಹಂಚಿಕೆ ಮಾಡಲು ಸರ್ಕಾರ ಮುಂದಾಗಿದೆ. ಆದರೆ, ಮರಳೂರು ಗ್ರಾಮಸ್ಥರು ತಮ್ಮ ಜಾನುವಾರುಗಳ ಮೇವಿಗೆ ಈ ಜಮೀನನ್ನೇ ಅವಲಂಬಿಸಿದ್ದಾರೆ. ಗೊದ್ದನಪುರ ಗ್ರಾಮದಲ್ಲೇ ಸಾಕಷ್ಟು ಜಮೀನು ಇದ್ದು, ಅದನ್ನು ನಿವೇಶನ ಹಂಚಿಕೆಗೆ ಬಳಸಬಹುದು. ಆದ್ದರಿಂದ ಮರಳೂರು ಗ್ರಾಮದ ಗೋಮಾಳ ಜಮೀನನ್ನು ಮೇವಿಗಾಗಿ ಮೀಸಲಿಡಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.