ADVERTISEMENT

ಬಿಸಿಐ ಮೇಲ್ಮನವಿ ಪುರಸ್ಕರಿಸಲು ವಿಭಾಗೀಯ ಪೀಠ ನಕಾರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 19:37 IST
Last Updated 4 ಡಿಸೆಂಬರ್ 2021, 19:37 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಭಾರತೀಯ ವಕೀಲರ ಪರಿಷತ್‌ನ (ಬಿಸಿಐ) ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಕ್ಕೆ ಡಿ. 4ರಂದು (ಶುಕ್ರವಾರ) ನಡೆಯಬೇಕಿದ್ದ ಚುನಾವಣೆಗೆ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ನೀಡಿದ್ದ ತಡೆ ತೆರವುಗೊಳಿಸಲು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ನಿರಾಕರಿಸಿದೆ.

ಈ ಕುರಿತ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು.

‘ಈ ಸಂಬಂಧ ನಿಮ್ಮ ಆಕ್ಷೇಪಣೆ ಏನಿದ್ದರೂ ಏಕಸದಸ್ಯ ನ್ಯಾಯಪೀಠದಲ್ಲೇ ಒಂದು ವಾರದೊಳಗೆ ಸಲ್ಲಿಸಿ. ಅದನ್ನು ಏಕಸದಸ್ಯ ನ್ಯಾಯಪೀಠ ಕಾನೂನಾತ್ಮಕ ರೀತಿಯಲ್ಲಿ ಪರಿಶೀಸುತ್ತದೆ’ ಎಂಬ ಅಭಿಪ್ರಾಯವನ್ನು ವಿಭಾಗೀಯ ನ್ಯಾಯಪೀಠ ವ್ಯಕ್ತಪಡಿಸಿದೆ.

ADVERTISEMENT

ಚುನಾವಣೆಗೆ ತಡೆ ಕೋರಿ ಬಿಸಿಐ ಸದಸ್ಯರೂ ಆದ ಹೈಕೋರ್ಟ್‌ನ ವಕೀಲ ವೈ.ಆರ್.ಸದಾಶಿವ ರೆಡ್ಡಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿ ಮಧ್ಯಂತರ ಆದೇಶ ನೀಡಿತ್ತು.

‘ಬಿಸಿಐನ ಹಾಲಿ ಪದಾಧಿಕಾರಿಗಳ ಅಧಿಕಾರದ ಅವಧಿ 2022ರ ಏಪ್ರಿಲ್ 16ರವರೆಗೂ ಇದೆ. ಹಾಗಿರುವಾಗ, ಅವಧಿ ಮುಗಿಯುವ 4 ತಿಂಗಳು ಮುಂಚಿತವಾಗಿಯೇ ತರಾತುರಿಯಲ್ಲಿ ಚುನಾವಣೆ ನಡೆಸುವ ಅಗತ್ಯವಿಲ್ಲ. ಅದರಲ್ಲೂ ಸದಸ್ಯರಿಗೆ ಯಾವುದೇ ಸೂಚನೆ ನೀಡದೆ ಚುನಾವಣಾ ಸಭೆ ನಡೆಸಲಾಗಿದೆ. ಆದ್ದರಿಂದ, ಚುನಾವಣೆಗೆ ತಡೆ ನೀಡಬೇಕು’ ಎಂದು ಸದಾಶಿವ ರೆಡ್ಡಿ ಕೋರಿದ್ದರು.

ಈ ಕೋರಿಕೆಯನ್ನು ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿತ್ತು. ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಹುದ್ದೆಗಳಿಗೆ ಡಿ. 4ರಂದು ಚುನಾವಣೆ ನಡೆಸಲು ಭಾರತೀಯ ವಕೀಲರ ಪರಿಷತ್ತು ನ. 19ರಂದು ಹೈದರಾಬಾದ್‌ನಲ್ಲಿ ನಿರ್ಣಯ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.