ADVERTISEMENT

ವ್ಹೀಲಿ ಹಾವಳಿ ಹೆಚ್ಚಳ: ಗೃಹ ಸಚಿವ ಪರಮೇಶ್ವರ ಕಿಡಿ

ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 17:49 IST
Last Updated 27 ಜೂನ್ 2025, 17:49 IST
ಪೊಲೀಸ್ ಕ್ಯಾಪ್‌ ಬದಲಾವಣೆ?... ಪೊಲೀಸ್ ಕಾನ್‌ಸ್ಟೆಬಲ್‌ಗಳು ಧರಿಸುತ್ತಿರುವ ಕ್ಯಾಪ್‌ಗಳನ್ನು ಬದಲಾವಣೆ ಮಾಡುವ ಆಲೋಚನೆಯಿದ್ದು, ನಗರದಲ್ಲಿ ಶುಕ್ರವಾರ ನಡೆದ ಪೊಲೀಸ್ ಅಧಿಕಾರಿಗಳ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ ಪೊಲೀಸ್ ಕ್ಯಾಪ್‌ಗಳ ಮಾದರಿಯನ್ನು ಗೃಹ ಸಚಿವ ಜಿ.ಪರಮೇಶ್ವರ ಪರಿಶೀಲಿಸಿದರು
ಪೊಲೀಸ್ ಕ್ಯಾಪ್‌ ಬದಲಾವಣೆ?... ಪೊಲೀಸ್ ಕಾನ್‌ಸ್ಟೆಬಲ್‌ಗಳು ಧರಿಸುತ್ತಿರುವ ಕ್ಯಾಪ್‌ಗಳನ್ನು ಬದಲಾವಣೆ ಮಾಡುವ ಆಲೋಚನೆಯಿದ್ದು, ನಗರದಲ್ಲಿ ಶುಕ್ರವಾರ ನಡೆದ ಪೊಲೀಸ್ ಅಧಿಕಾರಿಗಳ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ ಪೊಲೀಸ್ ಕ್ಯಾಪ್‌ಗಳ ಮಾದರಿಯನ್ನು ಗೃಹ ಸಚಿವ ಜಿ.ಪರಮೇಶ್ವರ ಪರಿಶೀಲಿಸಿದರು   

ಬೆಂಗಳೂರು: ‘ನಗರದಲ್ಲಿ ವ್ಹೀಲಿ ಹಾವಳಿ ಹೆಚ್ಚಾಗಿದೆ. ಈ ಹಾವಳಿ ತಡೆಗಟ್ಟುವುದಕ್ಕೆ ಹೈಕೋರ್ಟ್, ಪೊಲೀಸರಿಗೆ ನಿರ್ದೇಶನ‌ ಮಾಡಬೇಕೇ? ರಾತ್ರಿ ಮೂರು ಗಂಟೆಯಲ್ಲಿ ವ್ಹೀಲಿ ಮಾಡುತ್ತಾರೆ. ಇದನ್ನು ತಡೆಗಟ್ಟದೆ ಹೋದರೆ ತೊಂದರೆ ಆಗುತ್ತದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಎಚ್ಚರಿಸಿದರು.

ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್‌ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಬೆಳಿಗ್ಗೆ ಮತ್ತು‌ ಸಂಜೆ ಎರಡು ಗಂಟೆ ಸಂಚಾರ ಡಿಸಿಪಿಗಳು ರಸ್ತೆಗೆ ಇಳಿದು ಕೆಲಸ ಮಾಡಬೇಕು. ಸಂಚಾರ ವಿಭಾಗಕ್ಕಾಗಿಯೇ ನಿರ್ದಿಷ್ಟವಾಗಿ ಡಿಸಿಪಿಗಳನ್ನು ನೇಮಿಸಿದರೂ ಸರಿಯಾಗಿ ಕೆಲಸ‌ ಮಾಡುತ್ತಿಲ್ಲ. ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು’ ಎಂದು ಸೂಚನೆ ನೀಡಿದರು.

ADVERTISEMENT

‘ಖಾಸಗಿ ಸಂಸ್ಥೆಯೊಂದರ ಸಮೀಕ್ಷೆ ಪ್ರಕಾರ, ನ್ಯಾಯ ಒದಗಿಸುವುದರಲ್ಲಿ ಕರ್ನಾಟಕ‌ ಪೊಲೀಸ್ ಮೊದಲ ಸ್ಥಾನದಲ್ಲಿ ಇದೆ. ಸಮೀಕ್ಷಾ ವರದಿಯಿಂದ ನಮ್ಮ ಬೆನ್ನು ನಾವೇ ತಟ್ಟಿಕೊಂಡು ಸಮಾಧಾನ ಪಟ್ಟುಕೊಂಡು ಸುಮ್ಮನೆ ಇರಲು ಆಗುವುದಿಲ್ಲ. ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ‌’ ಎಂದು ಎಚ್ಚರಿಸಿದರು.

‘ಕಾಲೇಜು ವಿದ್ಯಾರ್ಥಿಗಳಿಗೆ ಸುಲಭವಾಗಿ ಗಾಂಜಾ ಸಿಗುತ್ತಿದೆ. ಡ್ರಗ್ಸ್ ಪೆಡ್ಲರ್‌ಗಳನ್ನು ಮಾತ್ರವೇ ಹಿಡಿದು, ಮಾದಕ ದ್ರವ್ಯ ಸೇವಿಸಿರುವವರನ್ನು ಪ್ರಕರಣದಿಂದ ಕೈ ಬಿಡುವುದು ಸರಿಯಲ್ಲ. ಡ್ರಗ್ಸ್ ಸಂಪೂರ್ಣವಾಗಿ ನಿಯಂತ್ರಿಸದೇ ಹೋದರೆ, ಮುಂದಿನ ದಿನಗಳಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೋಮು ಹಿಂಸೆ ನಿಗ್ರಹ ಪಡೆಯನ್ನು ಬಹಳ ಒಳ್ಳೆಯ ಉದ್ದೇಶದಿಂದ ಸ್ಥಾಪಿಸಲಾಗಿದೆ. ಇದನ್ನು ಯಶಸ್ವಿಗೊಳಿಸಲೇಬೇಕು. ಇದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಮುನ್ನಡೆಸಬೇಕು. ಕೋಮು ಪ್ರಚೋದನೆ ಮಾಡುವವರಿಗೆ ಭಯ ಹುಟ್ಟಬೇಕು’ ಎಂದು ತಿಳಿಸಿದರು.

‘ಕೋಮು ಗಲಾಟೆಗಳು ಶಿವಮೊಗ್ಗ ಜಿಲ್ಲೆಯಲ್ಲಿ ಇರಲಿಲ್ಲ. ಈಗ ಆ ಜಿಲ್ಲೆಗೂ ವ್ಯಾಪಿಸಿದೆ. ಇದನ್ನು ಸಂಪೂರ್ಣವಾಗಿ ನಿಯಂತ್ರಿಸದಿದ್ದಲ್ಲಿ ರಾಜ್ಯದಾದ್ಯಂತ ಮುಂದುವರಿಯುತ್ತವೆ. ಇಲಾಖೆಯ ಕಾರ್ಯ ನಿರ್ವಹಣೆ ಉತ್ತಮವಾಗಿ ಇರಬೇಕು’ ಎಂದು ಸೂಚಿಸಿದರು.

‘ಆಂಧ್ರಪ್ರದೇಶ, ಗೋವಾ ರಾಜ್ಯಗಳಿಂದ ಮಾದಕ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಸಾಗಣೆಯಾಗುತ್ತಿದೆ. ಯುವಕರ ಕೈಗೆ ಗಾಂಜಾ ಸುಲಭವಾಗಿ ಸಿಗುತ್ತಿರುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಬೇಸರ ಇದೆ. ಇದನ್ನು ಸಂಪೂರ್ಣವಾಗಿ ಮಟ್ಟಹಾಕಲು ಪೊಲೀಸರು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೆ ಯುವಜನರ ಭವಿಷ್ಯ ಹಾಳಾಗುತ್ತದೆ’ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಇದನ್ನು ನಿರ್ಲಕ್ಷಿಸಿ ನಿಯಂತ್ರಿಸದೇ ಹೋದರೆ ತೊಂದರೆ ಆಗಲಿದೆ
– ಜಿ.ಪರಮೇಶ್ವರ, ಗೃಹ ಸಚಿವ

ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗುತ್ತಿದೆ. ಅದಕ್ಕೆ ₹50 ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೃಹ ಸಚಿವರು ಮನವಿ ಮಾಡಿದರು‌.

ಅಧ್ಯಯನ ವರದಿ ಬಿಡುಗಡೆ

ಸೈಬರ್‌ ಅಪರಾಧಗಳಲ್ಲಿ ಅಕ್ರಮ ಹಣ ವರ್ಗಾವಣೆಗೆ ನಕಲಿ ಬ್ಯಾಂಕ್‌ ಖಾತೆಗಳ ಬಳಕೆ ಬಗ್ಗೆ ಅಧ್ಯಯನ ವರದಿಯನ್ನು ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಯಿತು. ಬ್ಯಾಂಕ್‌ಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳು ಅನುಸರಿಸಬೇಕಾದ ಕ್ರಮಗಳು ಪೊಲೀಸ್‌ ಮತ್ತು ಇತರೆ ಕಾನೂನು ಜಾರಿ ಸಂಸ್ಥೆಗಳು ಅನುಸರಿಸಬೇಕಾದ ಕ್ರಮಗಳು ಹಾಗೂ ಸರ್ಕಾರ ನಿಯಂತ್ರಕರು ಕೈಗೊಳ್ಳಬಹುದಾದ ಕ್ರಮಗಳು ಕುರಿತು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಅಕ್ರಮ ಹಣದ ವರ್ಗಾವಣೆಗೆ ವ್ಯಾಪಕವಾಗಿ ನಕಲಿ ಬ್ಯಾಂಕ್‌ ಖಾತೆಗಳ ಬಳಕೆಯ ಬಗ್ಗೆ ಅಧ್ಯಯನ ಮಾಡಿ ಅವುಗಳನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಕುರಿತು ಶಿಫಾರಸು ಮಾಡಲು ಸಿಐಡಿಯ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರದಿಂದ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖಾಧಿಕಾರಿಗಳು ಡೇಟಾ ಸೆಕ್ಯೂರಿಟಿ ಕೌನ್ಸಿಲ್‌ ಆಫ್‌ ಇಂಡಿಯಾದ ತಜ್ಞರು ಹಾಗೂ ಬ್ಯಾಕಿಂಗ್‌ ವಲಯದ ಪ್ರತಿನಿಧಿಗಳು ಇದ್ದರು. ಈ ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಲಾಯಿತು.

‘ಮನೆ ಮನೆಗೆ ಪೊಲೀಸ್‌’ ಯೋಜನೆ

ವಾರ್ಷಿಕ ಸಮ್ಮೇಳನದಲ್ಲಿ ‘ಮನೆ ಮನೆಗೆ ಪೊಲೀಸ್’ ಯೋಜನೆಯ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ‘ಈ ಯೋಜನೆಯಿಂದ ಅಪರಾಧ ತಡೆಗೆ ಸಹಕಾರಿ ಆಗಲಿದೆ. ಸಾರ್ವಜನಿಕರ ಸಹಕಾರದಿಂದ ಶಂಕಾಸ್ಪದ ಚಟುವಟಿಕೆಗಳನ್ನು ಬೇಗ ಗುರುತಿಸಿ ತಡೆಗಟ್ಟಲು ಜನರಲ್ಲಿ ನಂಬಿಕೆ ಮೂಡಿಸಲು ಸಾಧ್ಯವಾಗಲಿದೆ. ಸ್ಥಳೀಯರ ಸಹಕಾರದಿಂದ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲಾಗುವುದು. ಪೊಲೀಸರೇ ಜನರ ಬಳಿಗೆ ಹೋದಾಗ ಭಯ ದೂರ ಆಗಲಿದೆ. ಅಪರಾಧ ಪ್ರಕರಣಗಳ ಕುರಿತು ಜಾಗೃತಿ ಮೂಡಿಸಲು ಸಾಧ್ಯವಾಗಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.