ADVERTISEMENT

ಹಗಲಿನಲ್ಲಿ ಮನೆ ಗುರುತು: ರಾತ್ರಿ ಕಳ್ಳತನ ಮಾಡುತ್ತಿದ್ದ ಮೂವರ ಬಂಧನ

ವಿದ್ಯಾರಣ್ಯಪುರ: ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 21 ಮೇ 2022, 16:36 IST
Last Updated 21 ಮೇ 2022, 16:36 IST
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ   

ಬೆಂಗಳೂರು: ನಗರದಲ್ಲಿ ಹಗಲು ಸುತ್ತಾಡಿ ಮನೆಗಳನ್ನು ಗುರುತಿಸಿ ರಾತ್ರಿ ಕಳ್ಳತನ ಮಾಡುತ್ತಿದ್ದ ಆರೋಪದಡಿ ಮೂವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

‘ಯಶವಂತಪುರ ವಿನಾಯಕನಗರದ ಶ್ರೀನಿವಾಸ್ ಅಲಿಯಾಸ್ ಸಿಲಿಂಡರ್ (38), ರಾಜಾನುಕುಂಟೆಯ ಸತೀಶ್‌ಕುಮಾರ್ ಅಲಿಯಾಸ್ ಕೊಕ್ಕರೆ (34) ಹಾಗೂ ಹೊಸಕೋಟೆ ನಂದಗುಡಿಯ ಶಿವನಪುರದ ರಾಜಣ್ಣ ಅಲಿಯಾಸ್ ಕರಡಿ (38) ಬಂಧಿತ. ಇವರಿಂದ ₹ 824 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವಿದ್ಯಾರಣ್ಯಪುರದ ಮುನೇಶ್ವರ ಬಡಾವಣೆ ಹಾಗೂ ದೇವಪ್ಪ ಬಡಾವಣೆಯ ಎರಡು ಮನೆಗಳಲ್ಲಿ ಇತ್ತೀಚೆಗೆ ಕಳ್ಳತನವಾಗಿತ್ತು. ಈ ಬಗ್ಗೆ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡಾಗ ಆರೋಪಿಗಳ ಸುಳಿವು ಸಿಕ್ಕಿತ್ತು’ ಎಂದೂ ತಿಳಿಸಿದರು.

ADVERTISEMENT

26 ಪ್ರಕರಣದಲ್ಲಿ ಆರೋಪಿ: ‘ಬಂಧಿತ ಆರೋಪಿ ಶ್ರೀನಿವಾಸ್, ಪದೇ ಪದೇ ಅಪರಾಧ ಕೃತ್ಯ ಎಸಗುತ್ತಿದ್ದ. ಈತನ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 26 ಪ್ರಕರಣಗಳು ದಾಖಲಾಗಿದ್ದವು’ ಎಂದು ಪೊಲೀಸರು ಹೇಳಿದರು.

‘ಇನ್ನೊಬ್ಬ ಆರೋಪಿ ಸತೀಶ್ ವಿರುದ್ಧವೂ 20 ಪ್ರಕರಣಗಳು ದಾಖಲಾಗಿದ್ದವು. ಮತ್ತೊಬ್ಬ ಆರೋಪಿ ರಾಜಣ್ಣ, ಎರಡು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮೂವರು ತಂಡ ಕಟ್ಟಿಕೊಂಡು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದರು’ ಎಂದೂ ತಿಳಿಸಿದರು.

‘ನಗರದ ಹಲವೆಡೆ ಹಗಲಿನಲ್ಲಿ ಆರೋಪಿಗಳು ಸಂಚರಿಸುತ್ತಿದ್ದರು. ಬೀಗ ಹಾಕಿರುತ್ತಿದ್ದ, ಅಂಗಣದಲ್ಲಿ ಕಸ ಬಿದ್ದಿರುತ್ತಿದ್ದ ಹಾಗೂ ರಂಗೋಲಿ ಹಾಕಿರದ ಮನೆಗಳನ್ನು ಗುರುತಿಸುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ರಾತ್ರಿ ಮನೆಗಳ ಬೀಗ ಮುರಿದು ಒಳಗೆ ನುಗ್ಗುತ್ತಿದ್ದರು. ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.