ADVERTISEMENT

ಬೆಂಗಳೂರು: ಗೃಹ ರಕ್ಷಕ ದಳದಿಂದ ಲಕ್ಷ ಗಿಡ ನೆಡುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 4:16 IST
Last Updated 26 ಜುಲೈ 2021, 4:16 IST
ಬಿಇಎಲ್‌ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವಕ್ಕೆ ಹೇಮಾ ಆರ್.ರಾವ್ ಮತ್ತು ಗೋಪಾಲಕೃಷ್ಣ ಬಿ.ಗೌಡರ್ ಚಾಲನೆ ನೀಡಿದರು. ಬಿಇಎಲ್‌ ಉಪಪ್ರಧಾನ ವ್ಯವಸ್ಥಾಪಕ ಎಂ.ಗುರುರಾಜ್, ಸಂರಕ್ಷಣಾಧಿಕಾರಿ ಜೀತೇಂದ್ರ ಸಿಂಗ್, ಡಾ.ಶಂಕರಪ್ಪ ಕೆ.ಜೆ. ಮತ್ತು ಇತರರು ಇದ್ದರು
ಬಿಇಎಲ್‌ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವಕ್ಕೆ ಹೇಮಾ ಆರ್.ರಾವ್ ಮತ್ತು ಗೋಪಾಲಕೃಷ್ಣ ಬಿ.ಗೌಡರ್ ಚಾಲನೆ ನೀಡಿದರು. ಬಿಇಎಲ್‌ ಉಪಪ್ರಧಾನ ವ್ಯವಸ್ಥಾಪಕ ಎಂ.ಗುರುರಾಜ್, ಸಂರಕ್ಷಣಾಧಿಕಾರಿ ಜೀತೇಂದ್ರ ಸಿಂಗ್, ಡಾ.ಶಂಕರಪ್ಪ ಕೆ.ಜೆ. ಮತ್ತು ಇತರರು ಇದ್ದರು   

ಬೆಂಗಳೂರು: ‘ನಗರದಲ್ಲಿ ಗೃಹ ರಕ್ಷಕ ದಳದಿಂದ ಈ ವರ್ಷ 1 ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಸ್ತೆ ಬದಿಯ, ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳ ಆವರಣ, ಶಾಲೆಗಳ ಪ್ರಾಂಗಣಗಳಲ್ಲಿನ ಖಾಲಿ ಜಾಗಗಳಲ್ಲಿ ಪ್ರತಿಯೊಬ್ಬ ಗೃಹಕ್ಷಕ ಸಿಬ್ಬಂದಿ ನಾಲ್ಕರಿಂದ ಐದು ಗಿಡಗಳನ್ನು ನೆಡಲಿದ್ದಾರೆ’ ಎಂದು ಬೆಂಗಳೂರು ಉಪವಿಭಾಗದ ಸಹಾಯಕ ಪೊಲೀಸ್ ಕಮಿಷನರ್‌ ಗೋಪಾಲಕೃಷ್ಣ ಬಿ.ಗೌಡರ್ ತಿಳಿಸಿದರು.

ಕರ್ನಾಟಕ ರಾಜ್ಯ ಗೃಹ ರಕ್ಷಕ ದಳವು ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಇಎಲ್ ಸಂಸ್ಥೆಯ ಆವರಣದಲ್ಲಿ ‌ಸಂಸ್ಥೆಯ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕಿ ಹೇಮಾ ಆರ್.ರಾವ್ ಮತ್ತು ಗೋಪಾಲಕೃಷ್ಣ ಬಿ.ಗೌಡರ್ ಅವರು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಇಎಲ್ ಆವರಣದಲ್ಲಿ 400 ಗಿಡಗಳನ್ನು ನೆಡಲಾಯಿತು.

ADVERTISEMENT

‘ಬಿಇಎಲ್ ನಮ್ಮ ದೇಶದ ಹೆಮ್ಮೆ. ಬಿಇಎಲ್ ಟೌನ್ ಶಿಪ್‌ನಲ್ಲಿ ಹಸಿರು ನೋಡಿದರೆ ಮನೋಲ್ಲಾಸವಾಗುತ್ತದೆ. ಇಲ್ಲಿ ವರ್ಷವಿಡೀ ಸಸಿ ನೆಡುವ ಕಾರ್ಯ ನಡೆಯುತ್ತಿರುತ್ತದೆ. ಈ ಸಂಸ್ಥೆ 30 ವರ್ಷಗಳಿಂದಲೂ ಗೃಹರಕ್ಷಕ ದಳಕ್ಕೆ ಸಹಕಾರ ನೀಡುತ್ತಿದೆ’ ಎಂದು ಗೋಪಾಲಕೃಷ್ಣ ಬಿ. ಗೌಡರ್ ತಿಳಿಸಿದರು.

ಹೇಮಾ ಆರ್‌. ರಾವ್, ‘ಗೃಹರಕ್ಷಕ ದಳದ ಮಹಿಳೆಯರ ಘಟಕವು ಬಿಇಎಲ್‌ನಲ್ಲಿ ಪ್ರಥಮವಾಗಿ ಆರಂಭವಾಗಿದ್ದು ನಮಗೆ ಹೆಮ್ಮೆ ತರುವ ವಿಷಯ. ರಾಜ್ಯದಲ್ಲಿ ಪೊಲೀಸ್‌ ಸಿಬ್ಬಂದಿಗೆ ಸರಿಸಮನಾಗಿ ಗೃಹರಕ್ಷಕ ದಳದ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವೆ ಅನನ್ಯವಾದುದು’ ಎಂದರು.

ಬಿಇಎಲ್‌ ಸಂಸ್ಥೆಯ ವಿವಿಧ ಅಧಿಕಾರಿಗಳು, ಕಾರ್ಮಿಕ ಸಂಘಗಳ ಪದಾಧಿಕಾರಿಗಳು‌, ತೋಟಗಾರಿಕೆ ಸಿಬ್ಬಂದಿ ಹಾಗೂ ಗೃಹರಕ್ಷಕ ಸಿಬ್ಬಂದಿ ಗಿಡಗಳನ್ನು ನೆಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.