ಬೆಂಗಳೂರು: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡದ ಕಾರಣಕ್ಕೆ ವಿಕ್ರಂ ಆಸ್ಪತ್ರೆ ಹಾಗೂ ಅಪೊಲೋ ಆಸ್ಪತ್ರೆಯ ಜಯನಗರ ಶಾಖೆಯ ಹೊರರೋಗಿಗಳ ವಿಭಾಗವನ್ನು (ಒಪಿಡಿ) 48 ಗಂಟೆಗಳು ಸ್ಥಗಿತಗೊಳಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಆದೇಶ ಹೊರಡಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳು ಶೇ 50 ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಬೇಕು ಎಂಬ ಸರ್ಕಾರ ಆದೇಶವನ್ನು ವಿಕ್ರಂ ಹಾಗೂ ಅಪೊಲೋ ಆಸ್ಪತ್ರೆಯ ಜಯನಗರ ಶಾಖೆ ಪಾಲಿಸದ ಹಿನ್ನೆಲೆಯಲ್ಲಿ ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಗೂಳೂರು ಶ್ರೀನಿವಾಸ್ ನೇತೃತ್ವದ ತಂಡ ಆಸ್ಪತ್ರೆಗಳಿಗೆ ಸೋಮವಾರ ಭೇಟಿ ನೀಡಿ, ಕೆಪಿಎಂಇ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಡಿ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿತ್ತು.
ಈ ಬಗ್ಗೆ ಒಂದು ದಿನದೊಳಗೆ ಸಮಜಾಯಿಷಿ ನೀಡಬೇಕು ಎಂದಿತ್ತು. ಆದರೆ, ಆಸ್ಪತ್ರೆಗಳು ಇದಕ್ಕೆ ಉತ್ತರ ನೀಡಿಲ್ಲ. ಹೀಗಾಗಿ ಒಪಿಡಿ ಸ್ಥಗಿತ ಮಾಡುವಂತೆ ಆದೇಶ ಹೊರಡಿಸಲಾಗಿದೆ.
ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು
ಜಯನಗರ ಶಾಖೆಯನ್ನು ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿರುವುದಾಗಿ ಘೋಷಿಸಿರುವ ಅಪೊಲೋ ಆಸ್ಪತ್ರೆ, 50 ಹಾಸಿಗೆಗಳನ್ನು ಸರ್ಕಾರ ಶಿಫಾರಸು ಮಾಡುವ ರೋಗಿಗಳಿಗೆ ಮೀಸಲಿಡಲಾಗುವುದು ಎಂದು ಡಾ. ಗೋವಿಂದಯ್ಯ ಯತೀಶ್ ಸ್ಪಷ್ಟನೆ ನೀಡಿದೆ. ಪ್ರತಿಕ್ರಿಯೆ ನೀಡಲು ವಿಕ್ರಂ ಆಸ್ಪತ್ರೆ ನಿರಾಕರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.