ಬೆಂಗಳೂರು: ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಸೋಮವಾರದಿಂದ ನಗರದಲ್ಲಿ ಹೋಟೆಲ್ಗಳು ಕಾರ್ಯಾರಂಭಗೊಂಡರೂ ವ್ಯಾಪಾರ ಶೇ 50ಕ್ಕಿಂತ ಹೆಚ್ಚು ದಾಟಿಲ್ಲ.
ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಹೋಟೆಲ್ಗಳಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರು ಹೋಟೆಲ್ಗಳತ್ತ ಮುಖ ಮಾಡಿಲ್ಲ.
‘ಕಾಯಂ ಗ್ರಾಹಕರು ಮಾತ್ರ ಹೋಟೆಲ್ಗೆ ಬರುತ್ತಿದ್ದಾರೆ. ಮನೆಯಿಂದಲೇ ಕೆಲಸ ಮಾಡುತ್ತಿರುವ ಕಾರಣಅನೇಕ ಉದ್ಯೋಗಿಗಳು ಆಹಾರ ಸವಿಯಲು ಎಂದಿನಂತೆ ಬರುತ್ತಿಲ್ಲ. ಇದನ್ನು ಗಮನಿಸಿ ಹೋಟೆಲ್ ಸಿಬ್ಬಂದಿಯನ್ನೂ ಕಡಿಮೆ ಮಾಡಲಾಗಿದೆ. ಮೊದಲಿನಂತೆ ಗ್ರಾಹಕರನ್ನು ಕಾಣಲು ಇನ್ನೂ ಎರಡು ತಿಂಗಳು ಬೇಕಾಗಬಹುದು’ ಎನ್ನುತ್ತಾರೆ ಬಸವನಗುಡಿಯ ರಾಮಕೃಷ್ಣ ವೃತ್ತದ ಬಳಿ ಇರುವ ಎಸ್ಎಲ್ವಿ ಕಾರ್ನರ್ ಮಾಲೀಕ ರಾಜೇಂದ್ರ.
‘ದಿನಕ್ಕೆ ಒಂದು ಸಾವಿರ ಮಂದಿ ಹೋಟೆಲ್ಗೆ ಬರುತ್ತಿದ್ದರು. ನಿನ್ನೆಯಿಂದ 300ರಿಂದ 500 ಮಂದಿ ಬಂದಿರಬಹುದು. ಆಹಾರ ಪಟ್ಟಿಯನ್ನೂ ಕಡಿಮೆ ಮಾಡಿದ್ದೇವೆ. ಶೇ 50ರಷ್ಟು ವ್ಯಾಪಾರ ಕುಸಿದಿದೆ’ ಎಂದು ತಿಳಿಸಿದರು.
‘ಮೊದಲೆರಡು ದಿನಗಳಲ್ಲಿ ಕಡಿಮೆ ಗ್ರಾಹಕರು ಬಂದಿದ್ದಾರೆ. ಒಂದೇ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಂದಾಗ ಅವರನ್ನು ನಿಭಾಯಿಸಲು ಹೋಟೆಲ್ಗಳಲ್ಲಿ ಮೊದಲಿನಂತೆ ಮುಕ್ತ ವಾತಾವರಣ ಇಲ್ಲ. ಹೋಟೆಲ್ಗಳಲ್ಲಿ ಸಿಬ್ಬಂದಿಯೂ ಕಡಿಮೆ ಇದ್ದಾರೆ. ಹಿಂದಿನಂತೆ ತ್ವರಿತ ಸೇವೆ ನೀಡುವುದೂ ಕಷ್ಟ’ ಎಂದು ವಿದ್ಯಾರ್ಥಿಭವನದ ಆಡಳಿತ ಪಾಲುದಾರ ಅರುಣ್ ಅಡಿಗ ವಿವರಿಸಿದರು.
‘ರುಚಿಗೆ ಹೆಚ್ಚು ಆದ್ಯತೆ ನೀಡುವ ನಾವು ಶುಚಿಗೂ ಅಷ್ಟೇ ಆದ್ಯತೆ ನೀಡಬೇಕಿದೆ. ನಮ್ಮ ಹೋಟೆಲ್ಗೆ ಬರುವ ಶೇ 90ರಷ್ಟು ಮಂದಿ ದೋಸೆ ಪ್ರಿಯರು. ದಿನಕ್ಕೆ ಒಂದು ಸಾವಿರಕ್ಕೂ ಹೆಚ್ಚು ಗ್ರಾಹಕರು ಹೋಟೆಲ್ಗೆ ಬರುತ್ತಿದ್ದರು. ಮಂಗಳವಾರ ಅಂದಾಜು 600 ಮಂದಿ ಹೋಟೆಲ್ಗೆ ಬಂದಿರಬಹುದು. ಮೊದಲಿನಂತೆ ಹೋಟೆಲ್ಗಳಲ್ಲಿ ಗುಂಪು ಸೇರಿ ಹರಟೆ ಹೊಡೆಯುತ್ತಾ ಆಹಾರ ಸೇವಿಸುವವರಿಲ್ಲ. ಗ್ರಾಹಕರ ಸಂಖ್ಯೆ ಕ್ರಮೇಣ ಹೆಚ್ಚಾಗಲಿದೆ’ ಎಂದು ತಿಳಿಸಿದರು.
ಪಾರ್ಸೆಲ್ ತೆಗೆದುಕೊಳ್ಳುವವರೇ ಹೆಚ್ಚು: ‘ಲಾಕ್ಡೌನ್ ಸಡಿಲಗೊಂಡ ಬಳಿಕ ಪಾರ್ಸೆಲ್ ತೆಗೆದುಕೊಂಡು ಹೋಗುವವರು ಹೆಚ್ಚಾಗಿದ್ದಾರೆ. ಹೋಟೆಲ್ಗಳಲ್ಲಿ ಕೂತು ತಿನ್ನಲು ಜನ ಹಿಂದೇಟು ಹಾಕುತ್ತಿದ್ದಾರೆ’ ಎಂದು ಶ್ರೀನಗರದ ವೆಂಕಟೇಶ್ವರ ಮೆಸ್ನ ಮಾಲೀಕ ಗೋಪಾಲ್ ಮಾಹಿತಿ ನೀಡಿದರು.
‘ಶೇ 30ರಷ್ಟು ಹೋಟೆಲ್ಗಳು ತೆರೆದಿಲ್ಲ’
ನಗರದಲ್ಲಿ ಶೇ 30 ರಷ್ಟು ಹೋಟೆಲ್ಗಳು ಇನ್ನೂ ಕಾರ್ಯಾರಂಭಗೊಂಡಿಲ್ಲ. ವ್ಯಾಪಾರ ಮೊದಲಿನಂತಾಗುವ ನಂಬಿಕೆ ಇಲ್ಲದೆ, ಕಾರ್ಯಾರಂಭ ಮಾಡಲು ಹೋಟೆಲ್ಗಳ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದರು.
‘ವ್ಯಾಪಾರ ಚೆನ್ನಾಗಿ ನಡೆದು ನಿರೀಕ್ಷಿತ ಗ್ರಾಹಕರು ಬಂದಾಗ ಹೋಟೆಲ್ ಮಾಲೀಕರಿಗೆ ಬಾಡಿಗೆ ಪಾವತಿಗೆ, ಸಂಬಳ ನೀಡಲು ಅನುಕೂಲವಾಗುತ್ತದೆ. ಬಹುತೇಕ ಸಣ್ಣ ಹೋಟೆಲ್ಗಳು ಬಾಡಿಗೆ ಕಟ್ಟಡಗಳಲ್ಲಿವೆ. ಗ್ರಾಹಕರು ಬರದಿದ್ದರೂ ತಿಂಗಳ ಬಾಡಿಗೆ ಪಾವತಿಸಬೇಕು. ನಗರದಲ್ಲಿ 25 ಸಾವಿರಕ್ಕೂ ಹೆಚ್ಚು ಹೋಟೆಲ್ಗಳಿದ್ದು, 4 ಸಾವಿರಕ್ಕೂ ಹೆಚ್ಚು ಹೋಟೆಲ್ಗಳು ಮುಚ್ಚಿವೆ’ ಎಂದರು.
ಮಾಲ್ಗಳಲ್ಲಿ ಬೆರಳೆಣಿಕೆಯಷ್ಟು ಜನ
ನಗರದ ಮಾಲ್ಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಜನ ಮಂಗಳವಾರ ಕಂಡುಬಂದರು. ಗ್ರಾಹಕರ ಆರೋಗ್ಯದೃಷ್ಟಿಯಿಂದ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಸೇರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಬಹುತೇಕ ಮಾಲ್ಗಳು ಗ್ರಾಹಕರ ಕೊರತೆಯಿಂದ ಭಣಗುಡುತ್ತಿದ್ದವು.
‘ವಾರಾಂತ್ಯದಲ್ಲಿ ಯುವಜನಾಂಗ ರಜೆಯ ಅವಧಿ ಕಳೆಯಲು ಮಾಲ್ಗಳಲ್ಲಿ ಸೇರುತ್ತಿದ್ದರು. ಈಗ ಶಾಲಾ-ಕಾಲೇಜುಗಳು ಇಲ್ಲದಿರುವುದರಿಂದ ಮನೆಯಿಂದ ಹೊರಬರುತ್ತಿಲ್ಲ. ಈ ಶನಿವಾರ ಅಥವಾ ಭಾನುವಾರ ಹೆಚ್ಚಿನ ಗ್ರಾಹಕರು ಸೇರುವ ನಿರೀಕ್ಷೆ ಇದೆ’ ಎನ್ನುತ್ತಾರೆ ಮಾಲ್ ಸಿಬ್ಬಂದಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.