ದಾಬಸ್ಪೇಟೆ: ಸೋಂಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಎಡೇಹಳ್ಳಿ ಸರ್ಕಾರಿ ಗೋಮಾಳದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮೀಸಲಾಗಿದ್ದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳ ತೆರವು ಕಾರ್ಯಾಚರಣೆ ಶನಿವಾರ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು.
ಸರ್ವೇ ನಂ. 61 ಹಾಗೂ 62ರಲ್ಲಿ ಆರು ಎಕರೆ ಹತ್ತು ಗುಂಟೆ ಜಾಗವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ನೀಡಿದ್ದು, ಮಾರುಕಟ್ಟೆ ನಿರ್ಮಾಣಕ್ಕೆ ನಬಾರ್ಡ್ ಅಡಿ ₹5ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.
ಸುಮಾರು 250ಕ್ಕೂ ಹೆಚ್ಚು ಮಂದಿ ಇಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ತೆರವು ಕಾರ್ಯಾಚರಣೆಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯೊಂದಿಗೆ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಶಾಸಕ ಡಾ. ಕೆ. ಶ್ರೀನಿವಾಸ ಮೂರ್ತಿ, ‘ಪರಿಶೀಲನೆ ನಡೆಸದೆ ಹಿಂದಿನ ಜಿಲ್ಲಾಧಿಕಾರಿಗಳು ಎಪಿಎಂಸಿಗೆ ಜಾಗ ನಿಗದಿಗೊಳಿಸಿದ್ದರು. ಈಗ ಇಲ್ಲಿ ನಿರ್ಗತಿಕರು, ಬಡವರು ವಾಸಿಸುತ್ತಿದ್ದಾರೆ. ಅವರು ಎಲ್ಲಿಗೆ ಹೋಗಬೇಕು. ಎಪಿಎಂಸಿಗೆ ಮೀಸಲಾದ ಜಾಗ ಬಿಟ್ಟು, ಮುಂದಿನ ಉಳಿಕೆ ಜಾಗದಲ್ಲಿ ಇಲ್ಲಿನ ಕಡುಬಡವರಿಗೆ ನಿವೇಶನ ನೀಡಿ’ ಎಂದು ತಹಶೀಲ್ದಾರ್ಗೆ ತಿಳಿಸಿದರು.
‘ಬಡವರ ಮೇಲೆ ಹೀಗೆ ಏಕಾಏಕಿ ಪ್ರಹಾರ ನಡೆಸುವುದು ಸರಿಯಲ್ಲ, ಒಡವೆ ಅಡವಿಟ್ಟು, ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದೆವು. ಈಗ ಬೀದಿಗೆ ಬೀಳುವಂತಾಗಿದೆ’ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.