ADVERTISEMENT

‘ವೈಜ್ಞಾನಿಕ ಅರಿವು ಮೂಡಿಸಿದವರು’

ಪ್ರೊ.ಎಚ್‌.ಆರ್. ರಾಮಕೃಷ್ಣರಾವ್ ನುಡಿ ನಮನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 4:24 IST
Last Updated 26 ಸೆಪ್ಟೆಂಬರ್ 2022, 4:24 IST
ಕಾರ್ಯಕ್ರಮದಲ್ಲಿ (ಎಡದಿಂದ) ಪ್ರೊ.ಎಚ್.ಆರ್. ರಾಮಕೃಷ್ಣರಾವ್ ಅವರ ಅಳಿಯ ಅನಂತಮೂರ್ತಿ, ಮಗಳು ಸುಚರಿತ, ಮೊಮ್ಮಗಳ ಪತಿ ಕಾರ್ತಿಕ್, ಮೊಮ್ಮಗಳು ಪ್ರಣತಿ ಮತ್ತು ಮಗಳು ಹರ್ಷಾ ಅಜಿತ್ ಅವರು ಪ್ರೊ.ಎಚ್.ಆರ್ ರಾಮಕೃಷ್ಣರಾವ್ ದಂಪತಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು -ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ (ಎಡದಿಂದ) ಪ್ರೊ.ಎಚ್.ಆರ್. ರಾಮಕೃಷ್ಣರಾವ್ ಅವರ ಅಳಿಯ ಅನಂತಮೂರ್ತಿ, ಮಗಳು ಸುಚರಿತ, ಮೊಮ್ಮಗಳ ಪತಿ ಕಾರ್ತಿಕ್, ಮೊಮ್ಮಗಳು ಪ್ರಣತಿ ಮತ್ತು ಮಗಳು ಹರ್ಷಾ ಅಜಿತ್ ಅವರು ಪ್ರೊ.ಎಚ್.ಆರ್ ರಾಮಕೃಷ್ಣರಾವ್ ದಂಪತಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಾಡಿನ ಉದ್ದಗಲಕ್ಕೂ ಸಂಚರಿಸಿದ್ದ ಭೌತವಿಜ್ಞಾನದ ಪ್ರಾಧ್ಯಾಪಕ ಎಚ್‌.ಆರ್. ರಾಮಕೃಷ್ಣರಾವ್, ಗ್ರಾಮೀಣ ಭಾಗದ ಜನರಲ್ಲಿ ವೈಜ್ಞಾನಿಕ ಅರಿವು ಮೂಡಿಸಿದರು. ಅವರ ಅಗಲಿಕೆಯು ವಿಜ್ಞಾನ ಲೋಕಕ್ಕೆ ದೊಡ್ಡ ನಷ್ಟ’ ಎಂದು ಅವರ ಒಡನಾಡಿಗಳು ಹಾಗೂ ಆಪ್ತರು ಸ್ಮರಿಸಿಕೊಂಡರು.

ಉದಯಭಾನು ಕಲಾಸಂಘ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಬೆಂಗಳೂರು ವಿಜ್ಞಾನ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಂಟಿಯಾಗಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಎಚ್‌.ಆರ್. ರಾಮಕೃಷ್ಣರಾವ್ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

ವಿಜ್ಞಾನ ಲೇಖಕ ಪ್ರೊ.ಟಿ.ಆರ್. ಅನಂತರಾಮು ಅವರು, ‘ರಾಮಕೃಷ್ಣರಾವ್ ಅವರ ಜತೆಗೆ ಕೆಲಸ ಮಾಡುವ ಸುಯೋಗ ದೊರೆತ್ತಿತ್ತು. ಗ್ರಹಣ ಸೇರಿ ವಿವಿಧ ವಿಷಯಗಳ ಬಗ್ಗೆ ದೃಶ್ಯಮಾಧ್ಯಮಗಳಲ್ಲಿ ಅವರ ಜತೆಗೆ ಚರ್ಚಿಸಲುಜ್ಯೋತಿಷಿಗಳಿಗೆ ಭಯ ಆಗುತ್ತಿತ್ತು.ಗೌರವ ಪೂರ್ವಕವಾಗಿಯೇ ಸಂವಾದ ನಡೆಸಿ, ವಿವರಿಸುತ್ತಿದ್ದರು’ ಎಂದು ಸ್ಮರಿಸಿಕೊಂಡರು.

ADVERTISEMENT

ವಿಜ್ಞಾನ ಲೇಖಕಎಚ್.ಆರ್.ಕೃಷ್ಣಮೂರ್ತಿ, ‘ರಾಮಕೃಷ್ಣರಾವ್ ಅವರು ಕ್ರೈಸ್ಟ್ ಕಾಲೇಜಿನಲ್ಲಿ ಕನ್ನಡ ಸಂಘ ಕಟ್ಟಿ, ಕನ್ನಡ ಪರ ಕಾರ್ಯಕ್ರಮ ನಡೆಸಿದ್ದರು. ಉತ್ತಮ ಬ್ಯಾಡ್ಮಿಂಟನ್ ಪಟು ಆಗಿದ್ದರು. ಪ್ರಾಧ್ಯಾಪಕ ವೃತ್ತಿಯಲ್ಲಿ ನಿಷ್ಠೆ ಹೊಂದಿದ್ದರು. ಕೆಲವರು ಉದ್ಯೋಗ ದೊರೆತ ಬಳಿಕ ಅಧ್ಯಯನ ನಿಲ್ಲಿಸುತ್ತಾರೆ. ಆದರೆ, ಅವರು ಕಡೆಯ ದಿನದವರೆಗೂ ಅಧ್ಯಯನ ಕೈಗೊಂಡರು. ಬೇರೆ ಕಾಲೇಜಿನ ವಿದ್ಯಾರ್ಥಿಗಳಿಗೂ ಸರಳವಾಗಿ ವಿಜ್ಞಾನ ಹೇಳಿ ಕೊಟ್ಟಿದ್ದಾರೆ’ ಎಂದು ತಿಳಿಸಿದರು.

ನಿವೃತ್ತಸಸ್ಯವಿಜ್ಞಾನ ಪ್ರಾಧ್ಯಾಪಕ ವೈ.ತುಳಜಪ್ಪ, ‘1974ರಲ್ಲಿ ರಾಮಕೃಷ್ಣರಾವ್ ಅವರ ಸಂಪರ್ಕ ಲಭಿಸಿತು. ಆ ಕಾಲದಲ್ಲಿ ಭಾಷಣ ಸ್ಪರ್ಧೆಗಳಿಗೆ ನಿರ್ಣಾಯಕರನ್ನು ಆಯ್ಕೆ ಮಾಡುವುದು ಸವಾಲಾಗಿತ್ತು. ಆ ವೇಳೆರಾಮಕೃಷ್ಣರಾವ್ ನೆರವಾಗುತ್ತಿದ್ದರು.ಪುಸ್ತಕ ಬರೆಯುವುದು, ಅನುವಾದ ಮಾಡುವುದು ಸೇರಿ ವಿವಿಧ ಕಾರ್ಯಗಳಲ್ಲಿ ಅವರು ಸಕ್ರಿಯ ಆಗಿದ್ದರು’ ಎಂದು ತಿಳಿಸಿದರು.

ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷ ಎ.ಎಚ್‌.ರಾಮರಾವ್‌, ಪ್ರೊ.ಎಂ.ಆರ್. ನಾಗರಾಜು,ಟಿ.ವಿ. ರಾಜು, ವೈ.ಸಿ. ಕಮಲಾ, ನವೀನ್ ಕಲ್ಗುಂಡಿ, ಎಂ. ನರಸಿಂಹ,ಪತ್ರಕರ್ತ ರಂಗನಾಥ ಭಾರದ್ವಾಜ್ ಸೇರಿ ಹಲವರು ನುಡಿನಮನ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.