ಬೆಂಗಳೂರು: ‘ವಿಧಾನ ಪರಿಷತ್ ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ₹ 2 ಕೋಟಿಯಿಂದ ₹ 10 ಕೋಟಿಗೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿ ಸ್ಥಳೀಯ ಸಂಸ್ಥೆಗಳಿಂದ ಪರಿಷತ್ಗೆ ಆಯ್ಕೆಯಾದ ಕಾಂಗ್ರೆಸ್ ಸದಸ್ಯರು ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಪರಿಷತ್ನ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
‘ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಸದಸ್ಯರ ಕ್ಷೇತ್ರದ ವ್ಯಾಪ್ತಿಯಲ್ಲಿ 350ರಿಂದ 400 ಗ್ರಾಮ ಪಂಚಾಯಿತಿಗಳಿವೆ. ಶಾಲಾ ಕೊಠಡಿ, ರಸ್ತೆ, ಚರಂಡಿ ಕಾಮಗಾರಿ ಮುಂತಾದ ಮೂಲಸೌಕರ್ಯಗಳನ್ನು ಒದಗಿಸುವಂತೆ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳು ಮನವಿ ಸಲ್ಲಿಸುತ್ತಾರೆ. ಸದ್ಯ ನೀಡುತ್ತಿರುವ ₹2 ಕೋಟ ಸಾಲುವುದಿಲ್ಲ. ಕ್ಷೇತ್ರಾಭಿವೃದ್ಧಿ ನಿಧಿಯನ್ನು ₹25 ಕೋಟಿಗೆ ಹೆಚ್ಚಿಸಬೇಕು ಎಂದು ಬೆಳಗಾವಿಯ ಅಧಿವೇಶನದಲ್ಲಿ ಒತ್ತಾಯಿಸಲಾಗಿತ್ತು’ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
‘ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ 25 ಸದಸ್ಯರು ಇಂತಹ ಸಮಸ್ಯೆ ಎದುರಿಸುತ್ತಿದ್ದೇವೆ. ಗ್ರಾಮಗಳ ಜೊತೆ ಹೆಚ್ಚಿನ ಒಡನಾಟ ಇರುವುದರಿಂದ ಜನರ ಅವಶ್ಯಗಳನ್ನು ಈಡೇರಿಸುವ ಅನಿವಾರ್ಯ ಎದುರಾಗುತ್ತದೆ. ಹೀಗಾಗಿ, ಅನುದಾನ
ವನ್ನು ಕನಿಷ್ಠ ₹ 10 ಕೋಟಿಗೆ ಹೆಚ್ಚಿಸಿ ಬಜೆಟ್ನಲ್ಲಿ ಘೋಷಿಸಬೇಕು’ ಎಂದರು.
‘ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ನಾವು 2–3 ಜಿಲ್ಲೆಗಳನ್ನು ಪ್ರತಿನಿಧಿಸುತ್ತೇವೆ. ಸದ್ಯ ನೀಡುತ್ತಿರುವ ಅನುದಾನ ಅಭಿವೃದ್ಧಿಗೆ ಸಾಕಾಗುತ್ತಿಲ್ಲ. ಒಂದೊ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಅನುದಾನ ಹೆಚ್ಚಿಸಿ ಮುಖ್ಯಮಂತ್ರಿ ಘೋಷಿಸಬೇಕು. ಇಲ್ಲದೇ ಇದ್ದರೆ ಕೊಡುತ್ತಿರುವ ಅನುದಾನವನ್ನು ವಾಪಸ್ ಪಡೆಯಬೇಕು’ ಎಂದು ಪರಿಷತ್ ಸದಸ್ಯ ಎಸ್. ರವಿ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.