ADVERTISEMENT

ಡಿ. 5ರಿಂದ ವಿದ್ಯುತ್‌ ಗುತ್ತಿಗೆದಾರರ ಅನಿರ್ದಿಷ್ಟಾವಧಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 15:46 IST
Last Updated 2 ಡಿಸೆಂಬರ್ 2022, 15:46 IST

ಬೆಂಗಳೂರು: ಸಣ್ಣ ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಬೃಹತ್‌ ಟೆಂಡರ್‌ ಕರೆಯುವ ಆದೇಶವನ್ನು ರದ್ದುಪಡಿಸಿಬೇಕು ಎಂದು ಆಗ್ರಹಿಸಿ ಡಿ. 5ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘ ತಿಳಿಸಿದೆ.

₹1 ಲಕ್ಷದಿಂದ ₹5 ಲಕ್ಷದೊಳಗಿನ ಮೊತ್ತದ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು. ಬೆಳಕು ಯೋಜನೆಗೆ ಬೆಸ್ಕಾಂ ನೀಡುತ್ತಿರುವ ದರವನ್ನು ಎಲ್ಲಾ ಎಸ್ಕಾಂಗಳಲ್ಲಿ ಜಾರಿಗೊಳಿಸಿ, ಈ ಯೋಜನೆಯ ಕಾಮಗಾರಿ ನಿರ್ವಹಿಸಿರುವ ಬಿಲ್‌ಗಳಿಗೆ ಬಜೆಟ್‌ ಬಿಡುಗಡೆಗೊಳಿಸಬೇಕು ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ. ರಮೇಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ತತ್ಕಾಲ್‌ ಯೋಜನೆ ಅಡಿಯಲ್ಲಿ ನೀಡುತ್ತಿದ್ದ ಅನುದಾನ ಸ್ಥಗಿತಗೊಳಿಸಲಾಗಿದ್ದು, ಇದರಿಂದ ಲಕ್ಷಾಂತರ ರೈತರಿಗೆ ಅನನುಕೂಲವಾಗಿದೆ. ಎಲ್ಲಾ ಎಸ್ಕಾಂಗಳಿಗೂ ಏಕರೂಪದ ಕೆಇಆರ್‌ಸಿ ನಿಯಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಲೋಕೋಪಯೋಗಿ ಇಲಾಖೆ, ನೀರಾವರಿ ನಿಗಮ, ಮಹಾನಗರ ಪಾಲಿಕೆ, ಪಂಚಾಯತ್‌ ರಾಜ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿವಿಲ್‌ ಕಾಮಗಾರಿಗಳ ಜೊತೆಗೆ ವಿದ್ಯುತ್‌ ಕಾಮಗಾರಿಗಳನ್ನು ಸೇರಿ ಟೆಂಡರ್ ಕರೆಯುತ್ತಿರುವುದನ್ನು ರದ್ದುಗೊಳಿಸಿ, ಪ್ರತ್ಯೇಕ ಟೆಂಡರ್‌ ಕರೆಯಬೇಕು. ಸರ್ವರ್‌ ಮತ್ತು ಮಾಪಕಗಳ (ಮೀಟರ್‌) ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಎಂ. ಎನ್. ಉಮೇಶ್‌, ಎಚ್‌. ಎ. ಚಂದ್ರಬಾಬು, ಅನ್ವರ್‌ ಮಿಯಾ, ಶಿವಾನಂದ ಬಿ. ಹಾಲಪ್ಪನವರ್‌, ಕೆ ಚಂದ್ರಬಾಬು ಮತ್ತು ಶಿವರಾಜು ಐ. ಬಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.