
ಬೆಂಗಳೂರು: ಇಂಡಿಗೊ ವಿಮಾನಯಾನದ ಬಿಕ್ಕಟ್ಟು 6ನೇ ದಿನವೂ ಮುಂದುವರಿಯಿತು. ಹೊಸ ವಿಮಾನ ರದ್ದತಿ, ಪ್ರಯಾಣಿಕರ ಸಂಕಷ್ಟದ ನಡುವೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಪ್ರಯಾಣಿಕರಿಗೆ ಅನಿಶ್ಚಿತತೆ ಮತ್ತು ಅವ್ಯವಸ್ಥೆ ಕಾಡಿತು.
ಆರು ದಿನಗಳ ಹಿಂದೆ ವಿಮಾನ ಹಾರಾಟ ದಿಢೀರ್ ರದ್ದುಗೊಂಡಾಗ ಉಂಟಾದ ಗೊಂದಲದಿಂದಾಗಿ ವಿಮಾನದಲ್ಲಿ ಸಂಚರಿಸಲು ಟಿಕೆಟ್ ಬುಕ್ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಆದರೂ, ಅನಿವಾರ್ಯವಾಗಿ ಹೋಗಬೇಕಾದವರು ಸಮಸ್ಯೆಗೆ ಸಿಲುಕುತ್ತಿದ್ದಾರೆ.
ದೆಹಲಿ, ಹೈದರಾಬಾದ್, ಕೋಲ್ಕತ್ತ, ಮಂಗಳೂರು, ಭೋಪಾಲ್, ಕೊಚ್ಚಿ, ಶ್ರೀನಗರ ಸೇರಿದಂತೆ ವಿವಿಧೆಡೆ ಹೋಗಬೇಕಿದ್ದ 61 ವಿಮಾನಗಳು ಭಾನುವಾರ ರದ್ದಾಗಿರುವುದನ್ನು ಐದು ತಾಸುಗಳ ಮೊದಲೇ ತಿಳಿಸಿದ್ದರಿಂದ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿತ್ತು. ರದ್ದಾಗಿರುವುದರ ಅರಿವು ಇಲ್ಲದೇ ಬಂದ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ತೂಕಡಿಸುತ್ತಾ ಕುಳಿತಿರುವುದು, ಕೆಲವರು ಮಲಗಿರುವುದು ಕಂಡು ಬಂತು.
ಪ್ರವಾಸೋದ್ಯಮಕ್ಕೆ ಹೊಡೆತ: ತಿಂಗಳಿಗೆ 500 ಜನರಾದರೂ ನಮ್ಮ ಏಜೆನ್ಸಿ ಮೂಲಕ ಟಿಕೆಟ್ ಬುಕ್ ಮಾಡಿ ರಾಜ್ಯಕ್ಕೆ ಪ್ರವಾಸ ಬರುತ್ತಿದ್ದರು. ಈ ವಾರ ವಿಮಾನಯಾನ ರದ್ದಾಗಿರುವುದರಿಂದ 150ಕ್ಕೂ ಅಧಿಕ ಪ್ರವಾಸಿಗರು ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದಾರೆ. ಗ್ರಾಹಕರಿಗೆ ನೀಡುತ್ತಿದ್ದ ಉತ್ತಮ ಸೇವೆಯಿಂದಾಗಿ ನಮಗೆ ಒಳ್ಳೆಯ ಹೆಸರಿತ್ತು. ಇದೀಗ ಕಳಂಕ ತಟ್ಟುವಂತಾಗಿದೆ’ ಎಂದು ಟ್ರಾವೆಲ್ ಏಜೆಂಟ್ ಶಂಕರಮೂರ್ತಿ ಬೇಸರ ವ್ಯಕ್ತಪಡಿಸಿದರು.
ಮುಂಬೈಯಲ್ಲಿ ಒಂದೇ ವಿಮಾನವು ಮೂರು ರದ್ದಾಯಿತು. ಇದರಿಂದ ಪ್ರಯಾಣಿಕರು 16 ಗಂಟೆ ವಿಮಾನ ನಿಲ್ದಾಣದಲ್ಲೇ ಕಾಲ ಕಳೆಯುವಂತಾಯಿತು ಎಂದು ವಿವರಿಸಿದರು.
ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುವ ಆಸೆ ಹೊತ್ತು ಭಾನುವಾರ ಬೆಳಿಗ್ಗೆ ಬಂದಿದ್ದ ವೃದ್ಧೆ ಜ್ಯೋತಿ ಪಾಟೀಲ್ ಅವರಿಗೆ ಬೆಳಿಗ್ಗಿನ ವಿಮಾನ ರದ್ದಾಗಿರುವುದು ಆಮೇಲಷ್ಟೇ ಗೊತ್ತಾಯಿತು. ಸಂಜೆ 6.30ಕ್ಕೆ ವಿಮಾನ ಇರಲಿದೆ ಎಂದು ಹೇಳುತ್ತಿದ್ದಾರೆ. ಕೊನೇ ಕ್ಷಣದಲ್ಲಿ ಅದೂ ರದ್ದಾದರೆ ಏನು ಮಾಡುವುದು’ ಎಂದು ಕಳವಳ ವ್ಯಕ್ತಪಡಿಸಿದರು.
ರೋಶ್ನಿ ಎಂಬ ಪ್ರಯಾಣಿಕರೊಬ್ಬರು ಮೊದಲ ವಿಮಾನ ರದ್ದಾದಾಗ ಮಧ್ಯಾಹ್ನದ ನಂತರದ ವಿಮಾನವನ್ನು ಮತ್ತೆ ಹಣ ಪಾವತಿಸಿ ಬುಕ್ ಮಾಡಿದ್ದರು. ಮಧ್ಯಾಹ್ನ ವಿಮಾನ ಹೊರಡಿತ್ತಾದರೂ ನವೀಕರಿಸಿದ ಪ್ರಯಾಣಿಕರ ಪಟ್ಟಿಯಲ್ಲಿ ಅವರ ಹೆಸರು ಇಲ್ಲದ ಕಾರಣ ಅವರನ್ನು ಆರಂಭದಲ್ಲಿ ಹತ್ತದಂತೆ ನಿರ್ಬಂಧಿಸಲಾಯಿತು. ಕೊನೆಗೆ ಹೇಗೋ ಹೊರಡುವಂತಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.