ಬೆಂಗಳೂರು: ‘ತಂತ್ರಜ್ಞಾನಗಳ ಬೆಳವಣಿಗೆಯ ಭರದಲ್ಲಿ ನಾವು ಪರಿಸರ ಕಾಳಜಿ ಮರೆಯಬಾರದು. ಸುಸ್ಥಿರತೆ ಇಲ್ಲದ ಅಭಿವೃದ್ಧಿ ಪರಿಸರಕ್ಕೆ ಮಾರಕ ಎಂಬುದನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಗೋಕುಲ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಎಂ.ಆರ್. ಸೀತಾರಾಂ ತಿಳಿಸಿದರು.
ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಗರದಲ್ಲಿ ಹಮ್ಮಿಕೊಂಡಿದ್ದ ‘ಸುಸ್ಥಿರ ಅಭಿವೃದ್ಧಿಯಲ್ಲಿ ನೂತನ ತಂತ್ರಜ್ಞಾನ’ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.
‘ವಿವಿಧ ದೇಶಗಳು ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿವೆ. ನಮ್ಮಲ್ಲಿನ ಎಂಜಿನಿಯರ್ಗಳೂ ತಾವು ಕೈಗೆತ್ತಿಕೊಳ್ಳುವ ಯೋಜನೆಗಳಲ್ಲಿ ಸುಸ್ಥಿರತೆ ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಬೇಕು. ಹೊಗೆ ರಹಿತ ಉತ್ಪನ್ನಗಳ ಬಳಕೆ ಹೆಚ್ಚಬೇಕು. ನಾವು ಎಂಜಿಯನಿರಿಂಗ್ ವ್ಯಾಸಂಗ ಮಾಡುವ ವೇಳೆ ‘ಮೆಟೀರಿಯಲ್ಸ್ ಸೈನ್ಸ್’ನಲ್ಲಿ ತಂತ್ರಜ್ಞಾನ ಅಷ್ಟಾಗಿ ಬೆಳವಣಿಗೆ ಹೊಂದಿರಲಿಲ್ಲ. ಆ ವೇಳೆ ಜರ್ಮನ್ ತಂತ್ರಜ್ಞಾನ ಹೆಚ್ಚು ಬಳಕೆಯಲ್ಲಿತ್ತು. ಈಗ ಕಾಲ ಬದಲಾಗಿದ್ದು, ಇಲ್ಲಿಯೂ ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಬೆಳವಣಿಗೆ ಸಾಧಿಸಿದೆ’ ಎಂದು ಹೇಳಿದರು.
ಗೋಕುಲ ಶಿಕ್ಷಣ ಸಂಸ್ಥೆಯ ಮುಖ್ಯ ಶೈಕ್ಷಣಿಕ ಸಲಹೆಗಾರ ಕರಿಸಿದ್ದಪ್ಪ ಮಾತನಾಡಿ, ‘ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೊಸ ರೀತಿಯ ತಂತ್ರಜ್ಞಾನ ಬಂದಿದೆ. ಕಟ್ಟಡಗಳನ್ನು ಬೇಗ ನಿರ್ಮಾಣ ಮಾಡುವ ಉದ್ದೇಶದಿಂದ ಪರಿಸರಕ್ಕೆ ಹಾನಿ ಮಾಡುವಂತಹ ಉತ್ಪನ್ನಗಳನ್ನು ಬಳಕೆ ಮಾಡುವುದು ಸರಿಯಾದ ಕ್ರಮವಲ್ಲ. ನಾವು ಮತ್ತಷ್ಟು ಕಾಲ ಪರಿಸರದ ಜತೆಗೆ ಬಾಳಬೇಕು’ ಎಂದು ಹೇಳಿದರು.
ರಾಮನ್ ಸಂಶೋಧನಾ ಸಂಸ್ಥೆ ನಿರ್ದೇಶಕ ತರುಣ್ ಸೌರದೀಪ್, ‘ಮೆಟೀರಿಯಲ್ ಸೈನ್ಸ್ ವಿಭಾಗದಲ್ಲಿ ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧಗಳನ್ನು ಮಂಡಿಸುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.