ಜಿಕೆವಿಕೆ
ಯಲಹಂಕ: ‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಮೂಲ ಸೌಕರ್ಯಗಳನ್ನು ವೃದ್ಧಿಸಿಕೊಂಡು ದೇಶದಲ್ಲಿಯೇ ಅತ್ಯುತ್ತಮ ವಿಶ್ವವಿದ್ಯಾಲಯವಾಗಿ ಹೆಸರು ಗಳಿಸಿದೆ. ಅದಕ್ಕೆ ಜಿ.ಕೆ.ವೀರೇಶ್ ಸಹಿತ ಅನೇಕರು ಕಾರಣ’ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ಯಲ್ಲಿ ಕೃಷಿ ವಿಶ್ವ ವಿದ್ಯಾಲಯದ ಹಳೆಯ ವಿದ್ಯಾರ್ಥಿ ಗಳ ಸಂಘ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಹ ಯೋಗದಲ್ಲಿ ಆಯೋಜಿಸಿದ್ದ ‘ಜಿ.ಕೆ. ವೀರೇಶ್ ಉಪನ್ಯಾಸ ಹಾಗೂ 2024-25ನೇ ಸಾಲಿನ ರಾಜ್ಯ ಮಟ್ಟದ ಸಮಗ್ರ ಕೃಷಿಪದ್ಧತಿ ಪ್ರಶಸ್ತಿ ಪ್ರದಾನ‘ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಿಕೆವಿಕೆ ಕೃಷಿ ಕಾಲೇಜಿನಲ್ಲಿ ವಿದ್ಯಾರ್ಥಿ ಜೀವನ, ರಾಜಕೀಯ ದಲ್ಲಿ ಬೆಳೆಯಲು ಜಿಕೆವಿಕೆಯ ಪಾತ್ರವನ್ನು ಸಚಿವರು ಮೆಲುಕು ಹಾಕಿದರು.
ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ್ ದಳವಾಯಿ ಮಾತನಾಡಿ, ‘ಅಭಿವೃದ್ಧಿ ಹೊಂದಿದ ಪಾಶ್ಚಿಮಾತ್ಯ ರಾಷ್ಟ್ರಗಳ ವಿಶ್ವವಿದ್ಯಾಲಯಗಳಲ್ಲಿ ಹಳೆಯ ವಿದ್ಯಾರ್ಥಿ ಸಂಘಗಳು ಸಾಮಾಜಿಕ ವ್ಯವಸ್ಥೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ’ ಎಂದರು.
ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಬೆಳಗಟ್ಟಿ ಗ್ರಾಮದ ರೈತ ನಿಂಗಪ್ಪ ರಾಮಪ್ಪ ಚಿಲವಾಡಿ, ಚಾಮರಾಜನಗರ ಜಿಲ್ಲೆಯ ಚಿಂಚಳ್ಳಿ ಗ್ರಾಮದ ಪಿ.ದಯಾನಂದ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹುಲಿಕೊಂಡ ಗ್ರಾಮದ ಬಸವರಾಜ್ ನಡುವಿನಮನಿ ಅವರಿಗೆ ‘ಪ್ರೊ.ಜಿ.ಕೆ.ವೀರೇಶ್ ದತ್ತಿನಿಧಿ’ ಅಡಿಯಲ್ಲಿ ‘ಸಮಗ್ರ ಕೃಷಿ ಪದ್ಧತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.