ಬೆಂಗಳೂರು: ರಾಜಧಾನಿಯ ಡ್ರಗ್ಸ್ ದಂಧೆ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ರಾಷ್ಟ್ರೀಯ ಮಾದಕವಸ್ತು ನಿಗ್ರಹ ಘಟಕದ (ಎನ್ಸಿಬಿ) ಅಧಿಕಾರಿಗಳು, ಅಂತರರಾಷ್ಟ್ರೀಯ ಡ್ರಗ್ಸ್ ಜಾಲವೊಂದು ಕೆಂಗೇರಿಯಲ್ಲೇ ‘ಕೆಟಮಿನ್’ ಗುಳಿಗೆ ತಯಾರಿಕಾ ಘಟಕವನ್ನು ಹೊಂದಿತ್ತು ಎಂಬ ಆತಂಕಕಾರಿ ಸಂಗತಿಯನ್ನು ಬಯಲು ಮಾಡಿದ್ದಾರೆ.
ಮೆಜೆಸ್ಟಿಕ್, ಕೆಂಗೇರಿ ಹಾಗೂ ವಿದ್ಯಾನಗರದಲ್ಲಿ ಮೂರು ದಿನ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಕೆಂಗೇರಿಯ ಶಿವರಾಜ್ ಅರಸ್ (36) ಹಾಗೂ ಚೆನ್ನೈನ ಜೆ.ಕಣ್ಣನ್ (31) ಎಂಬುವರನ್ನು ಬಂಧಿಸಿ ಬರೋಬ್ಬರಿ 52 ಕೆ.ಜಿ ‘ಕೆಟಮಿನ್’ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ₹ 32 ಕೋಟಿ!
‘ಏ.30ರ ರಾತ್ರಿ 8.30ರ ಸುಮಾರಿಗೆ ಚೆನ್ನೈನ ಪೆಡ್ಲರ್ವೊಬ್ಬ, ಬೆಂಗಳೂರಿನ ಡ್ರಗ್ ಡೀಲರ್ನಿಂದ ಕೆಟಮಿನ್ ಖರೀದಿಸಲು ಮೆಜೆಸ್ಟಿಕ್ ಸಮೀಪದ ಮೂವಿಲ್ಯಾಂಡ್ ಬಳಿ ಬರುತ್ತಿದ್ದಾನೆ’ ಎಂಬ ಖಚಿತ ಮಾಹಿತಿ ಬಂತು. ಆ ಸುಳಿವು ಆಧರಿಸಿ ಎನ್ಸಿಬಿ ದಕ್ಷಿಣ ವಲಯದ ನಿರ್ದೇಶಕ ಸುನೀಲ್ ಕುಮಾರ್ ಸಿನ್ಹಾ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿತ್ತು.
‘8.30ಕ್ಕೆ ಸರಿಯಾಗಿ ಕರೋಲ ಕಾರಿನಲ್ಲಿ (ಕೆಎ–03 ಎಂಡಿ 7250) ಮೂವಿಲ್ಯಾಂಡ್ ಬಳಿ ಬಂದಿದ್ದ ಶಿವರಾಜ್, ಅಕ್ಕಿ ಚೀಲ ಹಾಗೂ ಟ್ರಾಲಿ ಬ್ಯಾಗ್ ಒಂದನ್ನು ಕಣ್ಣನ್ಗೆ ನೀಡುತ್ತಿದ್ದ. ಈ ಹಂತದಲ್ಲಿ ನಮ್ಮನ್ನು ನೋಡಿದ ಶಿವರಾಜ್, ತಕ್ಷಣ ಕಾರು ಹತ್ತಿದ. ಸಿಬ್ಬಂದಿ ಹತ್ತಿರಕ್ಕೆ ಹೋಗುತ್ತಿದ್ದಂತೆಯೇ ಅವರ ಕಡೆಗೇ ವಾಹನ ಚಲಾಯಿಸಿಕೊಂಡು ಪರಾರಿಯಾಗಿದ್ದ. ಆದರೆ, 26.50 ಕೆ.ಜಿ ಡ್ರಗ್ಸ್ ಸಮೇತ ಕಣ್ಣನ್ ಸ್ಥಳದಲ್ಲೇ ಸಿಕ್ಕಿಬಿದ್ದ’ ಎಂದು ಎನ್ಸಿಬಿ ಅಧಿಕಾರಿಯೊಬ್ಬರು ಹೇಳಿದರು.
‘ಮೊಬೈಲ್ ಕರೆ ವಿವರ ಆಧರಿಸಿ ಮರುದಿನ ಬೆಳಿಗ್ಗೆ ಶಿವರಾಜ್ನನ್ನು ಯಲಹಂಕದಲ್ಲಿ ಪತ್ತೆ ಮಾಡಲಾಯಿತು. ನಂತರ ಕೆಂಗೇರಿ ಹಾಗೂ ವಿದ್ಯಾನಗರದಲ್ಲಿನ ಆತನ ಎರಡು ಮನೆಗಳ ಮೇಲೆ ದಾಳಿ ನಡೆಸಿದಾಗ ಮತ್ತೆ 25.50 ಕೆ.ಜಿ ಕೆಟಮಿನ್ ಸಿಕ್ಕಿತು’ ಎಂದು ಮಾಹಿತಿ ನೀಡಿದರು.
ಸೆಲ್ಲಾರ್ನಲ್ಲಿ ಲ್ಯಾಬ್: ‘ಕೆಂಗೇರಿ ಮನೆಯ ಸೆಲ್ಲಾರ್ನಲ್ಲೇ ಲ್ಯಾಬ್ ಮಾಡಿಕೊಂಡಿದ್ದ ಶಿವರಾಜ್, ಕೆಟಮಿನ್ ತಯಾರಿಸಲು ಬೇಕಾದ ಎಲ್ಲ ಉಪಕರಣಗಳನ್ನು ಅಲ್ಲಿ ಇಟ್ಟುಕೊಂಡಿದ್ದ. ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ‘ಹೈದರಾಬಾದ್ನಲ್ಲೂ ನನ್ನ ಪ್ರಯೋಗಾಲಯವಿದೆ’ ಎಂದು ಬಾಯ್ಬಿಟ್ಟಿದ್ದ. ನಂತರ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಆ ಪ್ರಯೋಗಾಲಯದ ಮೇಲೂ ದಾಳಿ ಮಾಡಿಸಿದೆವು. ಮೇ 2ರಂದು ಇದೇ ಜಾಲದ ಇನ್ನೊಬ್ಬ ಸದಸ್ಯ ಹೈದರಾಬಾದ್ ಸೆರೆಸಿಕ್ಕಿದ್ದಾನೆ’ ಎಂದು ವಿವರಿಸಿದರು.
ಪುಡಿ ತರಿಸಿ, ಗುಳಿಗೆ ತಯಾರಿಕೆ
ಆಸ್ಟ್ರೇಲಿಯಾ ಹಾಗೂ ಆಗ್ನೇಯ ಏಷ್ಯಾ ರಾಷ್ಟ್ರಗಳ ಡ್ರಗ್ಸ್ ಜಾಲಗಳೊಂದಿಗೆ ಸಂಪರ್ಕ ಹೊಂದಿದ್ದ ಶಿವರಾಜ್, ಅಲ್ಲಿಂದ ಕೆಟಮಿನ್ ಪುಡಿಯನ್ನು ತರಿಸಿಕೊಳ್ಳುತ್ತಿದ್ದ. ಅದನ್ನು ಬಳಸಿಕೊಂಡು ತನ್ನ ಲ್ಯಾಬ್ನಲ್ಲಿ ಗುಳಿಗೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ.
‘ಕೆಟಮಿನ್ ಸೇವಿಸಿದರೆ ವಿಪರೀತ ನಶೆ ಏರಿ ಸ್ವಲ್ಪ ಸಮಯದಲ್ಲೇ ಪ್ರಜ್ಞಾಹೀನರಾಗುತ್ತಾರೆ. ಹೀಗಾಗಿಯೇ, ಕೆಲವರು ಮದ್ಯ ಹಾಗೂ ತಂಪು ಪಾನೀಯಗಳಲ್ಲಿ ಮಿಶ್ರಣ ಮಾಡಿ ಮಹಿಳೆಯರಿಗೆ ಕುಡಿಸಿ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಾರೆ. ಕೆಲವು ಪಂಚತಾರಾ ಹೋಟೆಲ್ಗಳಿಗೆ, ಪಬ್ಗಳಿಗೆ ಹಾಗೂ ಶ್ರೀಮಂತ ಗ್ರಾಹಕರಿಗೆ ಶಿವರಾಜ್ ತಂಡವೇ ಕೆಟಮಿನ್ ಪೂರೈಸುತ್ತಿತ್ತು’ ಎಂದು ಅಧಿಕಾರಿಗಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.