
FIR
– ಕಡತ ಚಿತ್ರ
ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಹೇಳಿ ಉದ್ಯಮಿಗೆ ₹81 ಲಕ್ಷ ವಂಚಿಸಿದ ಆರೋಪದಡಿ ದಂಪತಿ ವಿರುದ್ಧ ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು ಉತ್ತರ ವಿಭಾಗದ ನಿವಾಸಿ ಶ್ವೇತಾ ಜೈನ್ ಅವರು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಖಾಸಗಿ ದೂರು ಆಧರಿಸಿ ರಮ್ಯಾ ಮತ್ತು ಡಾ.ಪ್ರಮೋದ್ ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
‘ಸಹಕಾರ ನಗರದಲ್ಲಿ ಚಿಕಿತ್ಸೆಗೆ ತೆರಳಿದ್ದ ವೇಳೆ ಶಸ್ತ್ರಚಿಕಿತ್ಸಕ ಪ್ರಮೋದ್ ದಂಪತಿಯ ಪರಿಚಯವಾಯಿತು. ಈ ನಡುವೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವುದಾಗಿ ಪ್ರಮೋದ್ ಅವರ ಪತ್ನಿ ಹೇಳಿದರು. ಆಗ ಅವರ ಖಾತೆಗೆ ₹25 ಲಕ್ಷ ವರ್ಗಾವಣೆ ಮಾಡಲಾಯಿತು. ಹಂತ ಹಂತವಾಗಿ ₹81 ಲಕ್ಷ ವರ್ಗಾವಣೆ ಮಾಡಲಾಗಿತ್ತು. ₹20 ಲಕ್ಷ ಲಾಭ ಬಂದಿರುವುದಾಗಿ ಹೇಳಿದರು. ಬಳಿಕ 2024ರ ನವೆಂಬರ್ ವರೆಗೂ ಹಣ ತೆಗೆಯದಂತೆ ಸಲಹೆ ನೀಡಿದರು’ ಎಂದು ಶ್ವೇತಾ ಅವರ ಪತಿ ಆನಂದ್ ಜೈನ್ ತಿಳಿಸಿದರು.
ಕೆಲ ದಿನಗಳ ಬಳಿಕ ಹಣ ಮತ್ತು ಲಾಭಾಂಶ ನೀಡುವಂತೆ ಕೇಳಿದಾಗ ವಾಪಸ್ ನೀಡಲಿಲ್ಲ. ಹೀಗಾಗಿ ದೂರು ನೀಡಲಾಯಿತು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.