
ವಂಚನೆ
ಬೆಂಗಳೂರು: ಷೇರು ಪೇಟೆಯಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಲಾಭಾಂಶ ಕೊಡುವುದಾಗಿ ನಂಬಿಸಿ ವಂಚಕರು ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಗೆ ₹55 ಲಕ್ಷ ವಂಚಿಸಿರುವ ಘಟನೆ ನಡೆದಿದೆ.
ಕೆ.ಆರ್.ಪುರ ಠಾಣೆ ವ್ಯಾಪ್ತಿಯ ಹ್ಯಾಪಿ ಗಾರ್ಡನ್ ಲೇಔಟ್ ನಿವಾಸಿ ಪ್ರಶಾಂತ್ ಕುಮಾರ್ ಅವರ ದೂರು ಆಧರಿಸಿ ವೈಟ್ಫೀಲ್ಡ್ ಸೆನ್ ಕ್ರೈಂ ವಿಭಾಗದ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
‘ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಭವಾಗಲಿದೆ ಎಂದು ವಂಚಕರು, ಪ್ರಶಾಂತ್ ಅವರಿಗೆ ಸಂದೇಶ ಕಳುಹಿಸಿದ್ದರು. ಇವರ ಮೊಬೈಲ್ ನಂಬರ್ ಅನ್ನು ವಿವಿಧ ವಾಟ್ಸ್ ಆ್ಯಪ್ ಗ್ರೂಪ್ಗಳಿಗೆ ಸೇರಿಸಿದ್ದರು. ವಂಚಕರ ಮಾತು ನಿಜವೆಂದು ನಂಬಿದ ದೂರುದಾರ, ₹50 ಸಾವಿರ, ₹35 ಸಾವಿರ ಹೂಡಿಕೆ ಮಾಡಿದ್ದರು‘ ಎಂದು ಪೊಲೀಸರು ತಿಳಿಸಿದರು.
‘ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ದೂರುದಾರರನ್ನು ವಂಚಕರು ನಂಬಿಸಿದ್ದರು. ಹಲವು ರಾಷ್ಟ್ರೀಕೃತ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ₹55 ಲಕ್ಷವನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದರು. ಕೇವಲ ₹2 ಲಕ್ಷ ಮಾತ್ರ ಲಾಭಾಂಶ ನೀಡಿ, ಉಳಿದ ಹಣ ₹52 ಲಕ್ಷ ಪಡೆಯಬೇಕಾದರೆ ಹೆಚ್ಚಿನ ಹಣ ಹೂಡಿಕೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು’ ಎಂದು ಹೇಳಿದರು.
ಅನುಮಾನಗೊಂಡ ಪ್ರಶಾಂತ್ ಪೊಲೀಸರಿಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ವಿವರವನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.