ಬೆಂಗಳೂರು: ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇದೇ 2ರಂದು ಸಂಜೆ 4ಕ್ಕೆ ನಡೆಯಲಿರುವ ‘ಜನಾಗ್ರಹ ಸಭೆ’ಗೆ ಭರದ ಸಿದ್ಧತೆ ನಡೆದಿದೆ.
ನ. 25ರಂದು ನಡೆಸಲು ಉದ್ದೇಶಿಸಿದ್ದ ಈ ಸಭೆಯನ್ನು, ನಟ ಅಂಬರೀಷ್ ನಿಧನದಿಂದ ಮುಂದೂಡಲಾಗಿತ್ತು.ಮಂದಿರ ನಿರ್ಮಾಣಕ್ಕಾಗಿ ಸಂಸತ್ತಿನಲ್ಲಿ ಮಸೂದೆ ಮಂಡಿಸಬೇಕು ಅಥವಾ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಈ ಸಭೆಯಲ್ಲಿ ಹಕ್ಕೊತ್ತಾಯ ಮಾಡಲು ವಿಎಚ್ಪಿ ನಿರ್ಧರಿಸಿದೆ. ಸಮಾವೇಶದಲ್ಲಿ ವಿವಿಧ ಭಾಗಗಳಿಂದ 1 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಎಚ್ಪಿ ಮುಖಂಡರು ಹೇಳಿದ್ದಾರೆ.
ಸಮಾವೇಶಕ್ಕೆ ಮುನ್ನ ಮಧ್ಯಾಹ್ನ 1ರಿಂದ ಮೈದಾನದವರೆಗೆ ಶೋಭಾಯಾತ್ರೆ ನಡೆಯಲಿದೆ. 17 ಅಡಿ ಎತ್ತರದ ರಾಮನ ಮತ್ತು 12 ಅಡಿ ಎತ್ತರದ ಹನುಮಂತನ ಮೂರ್ತಿಗಳು ಮೆರವಣಿಗೆಯಲ್ಲಿ ಇರಲಿವೆ.ಜೆ.ಸಿ. ನಗರದಿಂದ ಹೊರಡಲಿರುವ ಶೋಭಾ ಯಾತ್ರೆ ಮೇಖ್ರಿ ಸರ್ಕಲ್, ಗುಟ್ಟಹಳ್ಳಿ, ಚಾಲುಕ್ಯ ವೃತ್ತ, ಕಾರ್ಪೊರೇಷನ್, ಲಾಲ್ಬಾಗ್ ರಸ್ತೆ ಮೂಲಕ ಮೈದಾನ ತಲುಪಲಿದೆ.
ಮೈದಾನದ ಸುತ್ತಲಿನ ರಸ್ತೆ ಬದಿ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ಗಳನ್ನು ವಿ.ವಿ.ಪುರಂ ರಸ್ತೆಗಳು, ಶಂಕರಮಠ ರಸ್ತೆ, ಕನ್ನಡ ಸಾಹಿತ್ಯ ಪರಿಷತ್ ರಸ್ತೆ, ಕೃಷ್ಣರಾವ್ ಪಾರ್ಕ್ ಸುತ್ತ, ಬಸವನಗುಡಿ ರಸ್ತೆ, ವಿಕ್ರಮ ರಸ್ತೆ, ರಾಮಕೃಷ್ಣಾಶ್ರಮ ಹತ್ತಿರ, ಕೋಟೆ ಹೈಸ್ಕೂಲ್ ಮೈದಾನದಲ್ಲಿ ನಿಲ್ಲಿಸಲು ಅವಕಾಶವಿದೆ ಎಂದು ಆರ್ಎಸ್ಎಸ್ ನಗರ ಘಟಕ ಪ್ರಮುಖರಾದ ಕೆ.ಎಸ್.ಶ್ರೀಧರ್ ತಿಳಿಸಿದರು.
ಸಭೆಯಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಹರಿದ್ವಾರದ ಚಿನ್ಮಯಾನಂದ ಸರಸ್ವತಿ ಮಹಾರಾಜ್, ಆರ್ಎಸ್ಎಸ್ ಸಹ ಸರಕಾರ್ಯವಾಹ ಸುರೇಶ್ ಭಯ್ಯಾಜಿ, ವಿಎಚ್ಪಿ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದಜಿ ಪರಾಂಡೆ ಭಾಗವಹಿಸಲಿದ್ದಾರೆ ಎಂದು ವಿಎಚ್ಪಿ ಪ್ರಕಟಣೆ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.