ADVERTISEMENT

‍‍ಪರಿವಾರಕ್ಕೆ ಶಕ್ತಿ ತುಂಬಲು ಯತ್ನ: ಜನತಾ ಪರಿವಾರ ಮುಖಂಡರ 8ನೇ ಗೋಪ್ಯ ಸಭೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 20:04 IST
Last Updated 11 ಫೆಬ್ರುವರಿ 2020, 20:04 IST

ಬೆಂಗಳೂರು: ಜನತಾ ಪರಿವಾರದಿಂದ ದೂರ ಸರಿದ ಸಮಾನ ಮನಸ್ಕ ನಾಯಕರು ನಗರದಲ್ಲಿ ಮಂಗಳವಾರ ಎಂಟನೇ ಬಾರಿಗೆ ಗೋಪ್ಯ ಸಭೆ ನಡೆಸಿದ್ದು, ಪರಿವಾರಕ್ಕೆ ಮತ್ತೆ ಶಕ್ತಿ ತುಂಬುವ ಪ್ರಯತ್ನ ಆರಂಭಿಸಿದ್ದಾರೆ.

ನಗರದ ಸಿಟಿ ಸೆಂಟಿಯರ್‌ ಹೋಟೆಲ್‌ನಲ್ಲಿ ಮುಖಂಡರಾದ ಮಹಿಮ ಜೆ.ಪಟೇಲ್, ಎಂ.ಪಿ.ನಾಡಗೌಡ, ರಮೇಶ್ ಗೌಡ, ಪಿ.ಎಸ್.ಪ್ರಕಾಶ್, ರಮೇಶ್‌ ಬಾಬು, ಲಕ್ಷ್ಮೀನಾರಾಯಣ, ಟಿ.ಪ್ರಭಾಕರ, ರಾಮರಾಜು ಮೊದಲಾದವರು ಸಭೆ ನಡೆಸಿದರು.

‘ಜನತಾ ಪರಿವಾರದವರು ಒಟ್ಟಾಗಬೇಕು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಬೇಕು. ಹಾಗಂತ ಜೆಡಿಎಸ್‌ನಿಂದ ದೂರ ಸರಿಯುತ್ತೇವೆ ಎಂದಲ್ಲ, ಅವರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಅಭ್ಯಂತರ ಇಲ್ಲ, ಅಂತೂ ಪರಿವಾರದ ಸದಸ್ಯರನ್ನು ಮತ್ತೆ ಒಗ್ಗೂಡಿಸುವ ಪ್ರಯತ್ನವಂತೂ ಆರಂಭವಾಗಿದೆ’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರೊಬ್ಬರು ತಿಳಿಸಿದರು.

ADVERTISEMENT

‘ಮುಂದಿನ ಸಭೆಗೆ ಉಮೇಶ್ ಕತ್ತಿ, ಸಿ.ಎಂ.ಇಬ್ರಾಹಿಂ, ಕೆ.ಬಿ.ಶಾಣಪ್ಪ, ಶ್ರೀನಿವಾಸ ಪ್ರಸಾದ್, ಬಿ.ಎಲ್‌.ಶಂಕರ್‌ ಮೊದಲಾದವರನ್ನು ಆಹ್ವಾನಿಸಲಿದ್ದೇವೆ. ಅವರು ಇದೀಗ ಪ್ರತಿನಿಧಿಸುತ್ತಿರುವ ಪಕ್ಷ ಬಿಟ್ಟು ಬನ್ನಿ ಎಂದು ಹೇಳುತ್ತಿಲ್ಲ’ ಎಂದು ರಮೇಶ್‌ ಬಾಬು ತಿಳಿಸಿದರು.

ಮಂಗಳವಾರ ನಡೆದ ಜೆಡಿಎಸ್‌ ಕಾರ್ಯಕಾರಿಣಿಯಲ್ಲಿ ಜನತಾ ಪರಿವಾರವನ್ನು ಮತ್ತೆ ಒಂದುಗೂಡಿಸುವ ಕಷ್ಟವನ್ನು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ತೋಡಿಕೊಂಡಿದ್ದರು. ಅದೇ ವೇಳೆಗೆ ಪರಿವಾರದವರ ಗೋಪ್ಯ ಸಭೆಯನ್ನು ಬಹಿರಂಗಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.