ಬೆಂಗಳೂರು:‘ಈ ವರ್ಷ ಕೇವಲ ಐದು ತಿಂಗಳಲ್ಲಿ 9,478 ಮಕ್ಕಳು ಅಪೌಷ್ಟಿಕತೆಗೆ ಒಳಗಾಗಿರುವುದು ಸರ್ಕಾರದ ಹೊಣೆಗೇಡಿತನಕ್ಕೆ ಉದಾಹರಣೆ. ಕೂಡಲೇ ಎಲ್ಲ ಮಕ್ಕಳಿಗೆ ಸೇರಬೇಕಾದ ಆಹಾರ ಪದಾರ್ಥಗಳನ್ನು ವಿತರಿಸುವ ಮೂಲಕ ಅಪೌಷ್ಟಿಕತೆ ತಡೆಯಲು ಮುಂದಾಗಬೇಕು‘ ಎಂದುಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ.
‘ಮಕ್ಕಳಲ್ಲಿ ಹೆಚ್ಚಿದ ಅಪೌಷ್ಟಿಕತೆ’ ಕುರಿತು ‘ಪ್ರಜಾವಾಣಿ’ಯಲ್ಲಿ ಸೋಮವಾರ (ಡಿ.21) ವರದಿ ಪ್ರಕಟವಾಗಿತ್ತು.
‘ಮಕ್ಕಳ ಅಪೌಷ್ಟಿಕತೆ ಕುರಿತಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರು ,‘ಕೋವಿಡ್ ಕಾರಣದಿಂದ ಆಹಾರ ಧಾನ್ಯ ಮನೆಗೆ ಪೂರೈಕೆ ಮಾಡಲಾಗುತ್ತಿದೆ. ಅದನ್ನೂ ದೊಡ್ಡವರೂ ಸೇವಿಸುತ್ತಿರುವುದು ಮಕ್ಕಳಲ್ಲಿ ಅಪೌಷ್ಟಿಕತೆಗೆ ಕಾರಣವಾಗಿದೆ’ ಎಂಬಬೇಜವಾಬ್ದಾರಿತನ ಮಾತುಗಳನ್ನು ಆಡಿದ್ದಾರೆ’ ಎಂದು ಸಂಘಟನೆಯ ಅಧ್ಯಕ್ಷೆ ದೇವಿ ದೂರಿದ್ದಾರೆ.
‘ಗೋದಾಮುಗಳಲ್ಲಿ ತುಂಬಿ ತುಳುಕುತ್ತಿರುವ ಆಹಾರ ಪದಾರ್ಥಗಳನ್ನು ಜನರಿಗೆ ವಿತರಿಸಿದ್ದರೆ ಅಪೌಷ್ಟಿಕತೆ ಪ್ರಮಾಣ ಏರುತ್ತಿರಲಿಲ್ಲ. ಮಾತೃ ಮರಣ ಹಾಗೂ ಶಿಶುಮರಣಗಳಿಗೆ ಸರ್ಕಾರವೇ ನೇರ ಹೊಣೆ’ ಎಂದಿದ್ದಾರೆ.
‘ಕೇರಳ ಮಾದರಿ ಪಡಿತರ ವ್ಯವಸ್ಥೆ ಮೂಲಕ ಆಹಾರ ಪದಾರ್ಥ ವಿತರಿಸಬೇಕು. ಮಧ್ಯಾಹ್ನದ ಬಿಸಿಯೂಟ ಹಾಗೂ ಅಂಗನವಾಡಿ ಮಕ್ಕಳಿಗೆ ಸೇರಬೇಕಾದ ಆಹಾರ ಪದಾರ್ಥಗಳನ್ನು ಕೂಡಲೇ ವಿತರಿಸಬೇಕು. ಜೀವನ ನಿರ್ವಹಣೆ ಕಷ್ಟವಾಗಿರುವ ಕುಟುಂಬಗಳಿಗೆ ಕನಿಷ್ಠ ಮಾಸಿಕ ₹7,500 ಸಹಾಯಧನ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.