ADVERTISEMENT

ಜಯದೇವ: ಇಂಡೋನೇಷ್ಯಾದ ನಾಲ್ವರಿಗೆ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 16:20 IST
Last Updated 17 ಆಗಸ್ಟ್ 2022, 16:20 IST
ಶಸ್ತ್ರಚಿಕಿತ್ಸೆಗೆ ಒಳಪಟ್ಟವರು ಹಾಗೂ ಅವರ ಪಾಲಕರ ಜತೆಗೆ ರೋಟೇರಿಯನ್ ಒ.ಪಿ ಖನ್ನಾ, ಡಾ.ಸಿ.ಎನ್. ಮಂಜುನಾಥ್, ಡಾ.ಪಿ.ಎಸ್. ಸೀತಾರಾಮ್ ಭಟ್, ಡಾ. ದಿವ್ಯಾ ಹಾಗೂ ಡಾ. ಉಷಾ ಇದ್ದಾರೆ.
ಶಸ್ತ್ರಚಿಕಿತ್ಸೆಗೆ ಒಳಪಟ್ಟವರು ಹಾಗೂ ಅವರ ಪಾಲಕರ ಜತೆಗೆ ರೋಟೇರಿಯನ್ ಒ.ಪಿ ಖನ್ನಾ, ಡಾ.ಸಿ.ಎನ್. ಮಂಜುನಾಥ್, ಡಾ.ಪಿ.ಎಸ್. ಸೀತಾರಾಮ್ ಭಟ್, ಡಾ. ದಿವ್ಯಾ ಹಾಗೂ ಡಾ. ಉಷಾ ಇದ್ದಾರೆ.   

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಇಂಡೋನೇಷ್ಯಾದ ಮೂವರು ಮಕ್ಕಳು ಹಾಗೂ ಯುವತಿಗೆ ಯಶಸ್ವಿಯಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದೆ.

ಮಕ್ಕಳು ಹುಟ್ಟಿನಿಂದಲೇ ಸಂಕೀರ್ಣ ಹೃದ್ರೋಗ ಸಮಸ್ಯೆ ಎದುರಿಸುತ್ತಿದ್ದರು. 28 ವರ್ಷದ ಯುವತಿ ಹೃದಯ ಕವಾಟದ ತೊಂದರೆಯಿಂದ ಬಳಲುತ್ತಿದ್ದರು. ಈ ನಾಲ್ವರೂ ಕೂಲಿ ಕಾರ್ಮಿಕ ಕುಟುಂಬದವರಾಗಿದ್ದಾರೆ.ಇಂಡೋನೇಷ್ಯಾದ ರೋಟರಿ ಸಂಸ್ಥೆ, ಬೆಂಗಳೂರಿನ ಅಂತರರಾಷ್ಟ್ರೀಯ ರೋಟರಿ 3190 ಮತ್ತು ನೀಡಿ ಹಾರ್ಟ್ ಫೌಂಡೇಷನ್‌ನರಾಜೇಂದ್ರ ರೈ ಅವರು ನಾಲ್ವರ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದಾರೆ.

ಕಳೆದ ಜುಲೈ 21ರಂದು ಸಂಸ್ಥೆಗೆ ದಾಖಲಾದ ಮೂರು ವರ್ಷದವಿಲಿಯಮ್ ಬುಂಡಾ ಜಯಾ, ಐದು ವರ್ಷದ ಓಸ್ ವಾಲ್ಡೋ ಲೀ, ಮೂರು ವರ್ಷದ ಮಾರ್ಸೆಲೋ ಆರ್ಕಾ ಸೀನ್ ಹಾಗೂ ಇಂಡಾ ಪೃಥ್ವಿ ಟಾನ್‍ಜಂಗ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸಂಸ್ಥೆಯ ವೈದ್ಯರಾದ ಡಾ.ಪಿ.ಎಸ್. ಸೀತಾರಾಮ್ ಭಟ್, ಡಾ. ದಿವ್ಯಾ, ಡಾ. ಜಯರಂಗನಾಥ್ ಹಾಗೂ ಡಾ. ಪ್ರಭಾಕರ್ ಅವರನ್ನು ಒಳಗೊಂಡ ವೈದ್ಯರ ತಂಡಯಶಸ್ವಿಯಾಗಿ ಈ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದೆ.

ADVERTISEMENT

‘ಜನಿಸಿದ ಪ್ರತಿ ಸಾವಿರ ಮಕ್ಕಳಲ್ಲಿ 6-7 ಮಕ್ಕಳಿಗೆ ಹೃದಯದಲ್ಲಿ ರಂಧ್ರ, ಹೃದಯದ ಕವಾಟ ಸಂಕುಚಿತಗೊಳ್ಳುವಿಕೆ ಸೇರಿ ವಿವಿಧ ಸಂಕೀರ್ಣ ಹೃದ್ರೋಗ ಸಮಸ್ಯೆಗಳು ಕಂಡುಬರುತ್ತಿವೆ.ಹೃದಯದಲ್ಲಿ ರಂಧ್ರ ಇರುವವರಿಗೆ ಜ್ವರ, ಕೆಮ್ಮು, ನೆಗಡಿ, ನ್ಯುಮೋನಿಯಾದಂತಹಸಮಸ್ಯೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಬೆಳವಣಿಗೆಯಲ್ಲಿ ಕುಂಠಿತ, ಚರ್ಮ ಮತ್ತು ಉಗುರು ನೀಲಿ ಬಣ್ಣಕ್ಕೆ ತಿರುಗುವುದು, ತೂಕ ಕಳೆದುಕೊಳ್ಳುವಿಕೆಯಂತಹ ಸಮಸ್ಯೆಗಳೂ ಕಂಡುಬರುತ್ತವೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

‘ಗುಣಮುಖರಾಗಿರುವ ನಾಲ್ವರೂ ಸದ್ಯದಲ್ಲೇ ತಮ್ಮ ದೇಶಕ್ಕೆ ಮರಳಲಿದ್ದಾರೆ. ಶಸ್ತ್ರಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಮಾಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.