ADVERTISEMENT

ಬಿಬಿಎಂಪಿ: ಚುನಾವಣೆಗೆ ಜೆಡಿಎಸ್ ತಯಾರಿ

ಪ್ರಮುಖರ ಸಭೆ ನಡೆಸಿದ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 21 ಮೇ 2022, 19:22 IST
Last Updated 21 ಮೇ 2022, 19:22 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬಿಬಿಎಂಪಿ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ, ಜೆಡಿಎಸ್ ಪಕ್ಷವು ಚುನಾವಣೆ ತಯಾರಿ ಆರಂಭಿಸಿದೆ.

‍ಪಕ್ಷದ ಕಚೇರಿಯಲ್ಲಿ ಶನಿವಾರ ಸಭೆ ನಡೆಸಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಸಂಘಟನೆ ಬಲಪಡಿಸುವ ಬಗ್ಗೆ ನಿರ್ದೇಶನ ನೀಡಿದರು.

‘ಸದ್ಯದಲ್ಲೇ ಬಿಬಿಎಂಪಿ ಚುನಾವಣೆ ಬರುತ್ತಿದೆ. ಈ ಹೊತ್ತಿನಲ್ಲಿ ಜೆಡಿಎಸ್‍ ಬಗ್ಗೆ ಇರುವ ಜನರಲ್ಲಿ ಇರುವ ವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡಬೇಕಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಜನ ಬೇಸತ್ತಿದ್ದಾರೆ. ಪ್ರತಿ ವಾರ್ಡ್ ನಲ್ಲೂ ಪಕ್ಷ ಸಂಘಟಿಸುವ ಕೆಲಸ ಆಗಬೇಕು. ಜನರನ್ನು ಪಕ್ಷದ ಕಡೆ ಸೆಳೆಯುವ ಕೆಲಸ ಮಾಡಬೇಕು’ ಎಂದು ಕುಮಾರಸ್ವಾಮಿ ತಾಕೀತು ಮಾಡಿದರು.

ADVERTISEMENT

‘ಜೆಡಿಎಸ್ ಕಾರ್ಯಕರ್ತರು ಕೇವಲ ವಿಸಿಟಿಂಗ್ ಕಾರ್ಡ್ ಮತ್ತು ಹೆಸರು ಹಾಕಿಸಿಕೊಳ್ಳುವುದಕ್ಕಷ್ಟೆ ಸೀಮಿತವಾಗಬಾರದು. ಜನರಿಗಾಗಿ ಕೆಲಸ ಮಾಡಿದರೆ ತಾನಾಗಿಯೇ ಹುದ್ದೆ, ಅಧಿಕಾರ ಎಲ್ಲವೂ ಸಿಗುತ್ತದೆ’ ಎಂದರು.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು,‘ಬೆಂಗಳೂರು ನಗರಕ್ಕೆ ನಾನು ಮಾತ್ರ ಸಾರಥಿ ಅಲ್ಲ. ಕಾರ್ಯಕರ್ತರ ಜೊತೆಗೆ ಸೇರಿ ಕೆಲಸ ಮಾಡುತ್ತೇನೆ. ನಗರದಲ್ಲಿ ಒಳ್ಳೆಯ ಕಾರ್ಯಕರ್ತರು ಇದ್ದಾರೆ. ಅವರಿಗೆ ಅವಕಾಶ ಸಿಕ್ಕಿಲ್ಲ. ಬಿಬಿಎಂಪಿ ಚುನಾವಣೆಯಲ್ಲಿ ಕೆಲಸ ಮಾಡುವವರಿಗೆ ಪ್ರೋತ್ಸಾಹ ಕೊಡುವೆ’ ಎಂದರು.

‘ನಗರದ ಪ್ರತಿ ಬಡಾವಣೆ ಜನರ ಸಮಸ್ಯೆ ಕೇಳುವ ಬಗ್ಗೆ ಚರ್ಚೆ ನಡೆದಿದೆ. ಇದರ ಜೊತೆಗೆ ಯಾವ ರೀತಿ ಕೆಲಸ ಆಗಬೇಕು. ಜನರ ಅಪೇಕ್ಷೆ ಏನಿದೆ ಎಂಬ ಬಗ್ಗೆ ತಿಳಿದುಕೊಳ್ಳಲು ಆಂದೋಲನ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.