ADVERTISEMENT

ಜ್ಞಾನಭಾರತಿ: ರಸ್ತೆ ಬದಿ ತ್ಯಾಜ್ಯ, ನಾಯಿಗಳ ಕಾಟ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 16:10 IST
Last Updated 28 ಜುಲೈ 2025, 16:10 IST
ಹೊರ ವರ್ತುಲ ರಸ್ತೆ ಪಾದಚಾರಿ ಮಾರ್ಗದಲ್ಲಿ ಬಿಸಾಡಿರುವ ತ್ಯಾಜ್ಯವನ್ನು ಪ್ಲಾಸ್ಟಿಕ್‌ ಸಹಿತ ತಿನ್ನುತ್ತಿರುವ ಜಾನುವಾರು 
ಹೊರ ವರ್ತುಲ ರಸ್ತೆ ಪಾದಚಾರಿ ಮಾರ್ಗದಲ್ಲಿ ಬಿಸಾಡಿರುವ ತ್ಯಾಜ್ಯವನ್ನು ಪ್ಲಾಸ್ಟಿಕ್‌ ಸಹಿತ ತಿನ್ನುತ್ತಿರುವ ಜಾನುವಾರು    

ರಾಜರಾಜೇಶ್ವರಿನಗರ: ಬೆಂಗಳೂರು ವಿಶ್ವವಿದ್ಯಾಲಯದ ವಸತಿಗೃಹ ಸಮೀಪವಿರುವ ಹೊರವರ್ತುಲ ರಸ್ತೆಯ ಸುತ್ತಮುತ್ತ ಅಡುಗೆ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ತಂದು ಬಿಸಾಡುತ್ತಿದ್ದಾರೆ. ಇದರಿಂದ ಇಡೀ ಪ್ರದೇಶವೇ ದುರ್ನಾತ ಬೀರುತ್ತಿರುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಜಾನುವಾರುಗಳು ಅಡುಗೆ ತ್ಯಾಜ್ಯದ ಜೊತೆಗೆ, ಪ್ಲಾಸ್ಟಿಕ್ ಚೀಲವನ್ನೂ ತಿನ್ನುವುದರಿಂದ ಅವುಗಳ ಹೊಟ್ಟೆಗೆ ಪ್ಲಾಸ್ಟಿಕ್ ಸೇರುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವರ್ತುಲ ರಸ್ತೆ, ಜ್ಞಾನಗಂಗಾನಗರ, ಶ್ರೀಗಂಧದ ಕಾವಲು, ಉಲ್ಲಾಳು ಮುಖ್ಯರಸ್ತೆ, ದೊಡ್ಡಗೊಲ್ಲರಹಟ್ಟಿ ಸುತ್ತಮುತ್ತಲಿನ ಪ್ರದೇಶದಲ್ಲೂ ಹೀಗೆ ಪ್ಲಾಸ್ಟಿಕ್ ಚೀಲದಲ್ಲಿ ಆಹಾರ ತ್ಯಾಜ್ಯವನ್ನು ತುಂಬಿ ಎಸೆಯಲಾಗುತ್ತಿದೆ.

ADVERTISEMENT

‘ಬಿಬಿಎಂಪಿ ಘನ ತ್ಯಾಜ್ಯ ವಿಭಾಗದವರು ನಾಲ್ಕೈದು ದಿನಕ್ಕೊಮ್ಮೆ ಕಸವನ್ನು ಸಂಗ್ರಹಿಸುತ್ತಾರೆ. ಅಷ್ಟರಲ್ಲೇ ಬೀದಿ ನಾಯಿಗಳು ಗುಂಪು ಗುಂಪಾಗಿ ಬಂದು ಈ ತ್ಯಾಜ್ಯವನ್ನು ಎಳೆದಾಡುತ್ತವೆ. ಈ ರಸ್ತೆಯಲ್ಲಿ ಓಡಾಡುವ ಮಕ್ಕಳು, ವೃದ್ದರು, ಪಾದಚಾರಿಗಳ ಮೇಲೆ ದಾಳಿ ಮಾಡುತ್ತಿವೆ’ ಎಂದು ಸ್ಥಳೀಯ ನಿವಾಸಿಗಳಾದ ರಾಮಕೃಷ್ಣ, ಕೃಷ್ಣೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ವಸತಿಗೃಹವಿರುವ ರಸ್ತೆಯಲ್ಲೇ ಚೈತನ್ಯ, ವಿಶ್ವಪರಿಶ್ರಮ ಪಿವಿಪಿ ಶಾಲೆಗಳಿವೆ. ತ್ಯಾಜ್ಯದ ದುರ್ವಾಸನೆ, ನಾಯಿಗಳ ಹಾವಳಿಯಿಂದಾಗಿ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಶಾಲೆಗೆ ಹೋಗಲು ಹೆದರುತ್ತಾರೆ ಎಂದು ಪೋಷಕರು ಹೇಳುತ್ತಾರೆ.

‘ಈ ರಸ್ತೆ ಬದಿಯಲ್ಲಿ ತಾಜ್ಯ ಸುರಿಯುವುದನ್ನು ನಿಯಂತ್ರಿಸಬೇಕು. ಈಗಾಗಲೇ ರಾಶಿ ಹಾಕಿರುವ ತ್ಯಾಜ್ಯವನ್ನು ತಕ್ಷಣವೇ ವಿಲೇವಾರಿ ಮಾಡಬೇಕು’ ಎಂದು ಸ್ಥಳೀಯ ಆಗ್ರಹಿಸಿದ್ದಾರೆ.

ದೊಡ್ಡ ಬಸ್ತಿ ಬಳಿ ಪ್ಲಾಸ್ಟಿಕ್‌ ಚೀಲದಲ್ಲಿ ಸುರಿದಿರುವ ಅಡುಗೆ ತ್ಯಾಜ್ಯವನ್ನು ತಿನ್ನುತ್ತಿರುವ ಜಾನುವಾರುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.