ಬೆಂಗಳೂರು: ‘2020ರ ಸ್ವಚ್ಛ ಸರ್ವೇಕ್ಷಣೆ ಅಭಿಯಾನದಲ್ಲಿ ಬೆಂಗಳೂರು ನಗರವು ಉತ್ತಮ ಅಂಕ ಗಳಿಸುವಲ್ಲಿ ಜನರ ಪಾತ್ರವೂ ಮುಖ್ಯವಾದುದು. ಸ್ವಚ್ಛ ಬೆಂಗಳೂರಿನ ನಿರ್ಮಾಣಕ್ಕೆ ಜನರೂ ಪಾಲಿಕೆ ಜೊತೆ ಕೈಜೋಡಿಸಬೇಕು’ ಎಂದು ಮೇಯರ್ ಎಂ.ಗೌತಮ್ ಕುಮಾರ್ ಮನವಿ ಮಾಡಿದರು.
ಸ್ವಚ್ಛ ಸರ್ವೇಕ್ಷಣೆ ಅಭಿಯಾನದ ಸಿದ್ಧತೆಯನ್ನು ಪರಿಶೀಲಿಸುವ ಸಲುವಾಗಿ ಅವರು ಸೋಮವಾರ ಅಧಿಕಾರಿಗಳ ಸಭೆ ನಡೆಸಿದರು.
'ಪಾಲಿಕೆ ವ್ಯಾಪ್ತಿಯಲ್ಲಿ ಸಮರ್ಪಕ ಕಸ ವಿಲೇವಾರಿ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇವುಗಳ ಯಶಸ್ವಿ ಅನುಷ್ಠಾನಕ್ಕೆ ಎಲ್ಲರೂ ಸಹಕರಿಸಬೇಕು’ ಎಂದರು.
ಸ್ವಚ್ಛ ಸರ್ವೇಕ್ಷಣ್ ಸರ್ವೆಗೆ ನಡೆದಿರುವ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ವಿಶೇಷ ಆಯುಕ್ತ (ಕಸ ವಿಲೇವಾರಿ) ಡಿ.ರಂದೀಪ್, ‘ಈ ಹಿಂದೆ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಪಾಲನೆ ಮಾಡುವ ನಿಯಮಗಳ ಬಗ್ಗೆ ಸಮರ್ಪಕ ಮಾಹಿತಿ ಇರಲಿಲ್ಲ. ಆ ಕಾರಣಕ್ಕಾಗಿ ಪರಿಣಿತ ತಂಡವನ್ನು ನಿಯೋಜನೆ ಮಾಡಿಕೊಂಡು ಸ್ವಚ್ಛ ಸರ್ವೇಕ್ಷಣ್ ನಲ್ಲಿ ಬೆಂಗಳೂರಿಗೆ ಉತ್ತಮ ಅಂಕ ಪಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರನ್ನು ಈಗಾಗಲೇ ಬಯಲು ಶೌಚಾಲಯಮುಕ್ತ (ಒಡಿಎಫ್) ಎಂದು ಘೋಷಣೆ ಮಾಡಲಾಗಿದೆ. ಒಡಿಎಫ್ ಸ್ಥಾನಮಾನಕ್ಕೆ ಈ ಬಾರಿ 500 ಅಂಕ ನಿಗದಿಪಡಿಸಲಾಗಿದೆ. ಒಡಿಎಫ್ ಪ್ಲಸ್ ಪ್ಲಸ್ ಸ್ಥಾನಮಾನ ಗಳಿಸಲು ಶ್ರಮ ವಹಿಸಲಾಗುತ್ತಿದೆ’ ಎಂದರು.
‘ಈ ಬಾರಿಯ ಅಭಿಯಾನದಲ್ಲಿ 4 ಸಾವಿರಕ್ಕೂ ಹೆಚ್ಚು ನಗರಗಳು ಪಾಲ್ಗೊಳ್ಳುತ್ತಿವೆ. ಅಗ್ರ 100ರ ಒಳಗಿನ ಸ್ಥಾನವನ್ನು ಗಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.