ADVERTISEMENT

ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ ಉದ್ಘಾಟನೆ

ವಿದ್ಯಾರ್ಥಿವೇತನ ವಿತರಣೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 20:01 IST
Last Updated 3 ಫೆಬ್ರುವರಿ 2019, 20:01 IST
ಜೆ.ಪಿ.ನಾರಾಯಣಸ್ವಾಮಿ ಅವರ ಪತ್ನಿ ಪಾರ್ವತಮ್ಮ (ಎಡದಿಂದ ಎರಡನೆಯವರು) ಮಾತೃಶ್ರೀ ಮನೋವಿಕಾಸ ಕೇಂದ್ರದ ಮಕ್ಕಳಿಗೆ ಚೆಕ್ ವಿತರಿಸಿದರು. ಜೆ.ಪಿ ಸುಧಾಕರ್, ಪುನೀತ್‌ ರಾಜಕುಮಾರ್, ಕರ್ನಾಟಕ ಪ್ರದೇಶ ಆರ್ಯಈಡಿಗರ ಸಂಘದ ಅಧ್ಯಕ್ಷ ಡಾ.ಎಂ ತಿಮ್ಮೇಗೌಡ, ಮನೋವಿಕಾಸ ಕೇಂದ್ರದ ಕಾರ್ಯದರ್ಶಿ ಎಸ್.ಬಸವರಾಜು ಇದ್ದರು -ಪ್ರಜಾವಾಣಿ ಚಿತ್ರ
ಜೆ.ಪಿ.ನಾರಾಯಣಸ್ವಾಮಿ ಅವರ ಪತ್ನಿ ಪಾರ್ವತಮ್ಮ (ಎಡದಿಂದ ಎರಡನೆಯವರು) ಮಾತೃಶ್ರೀ ಮನೋವಿಕಾಸ ಕೇಂದ್ರದ ಮಕ್ಕಳಿಗೆ ಚೆಕ್ ವಿತರಿಸಿದರು. ಜೆ.ಪಿ ಸುಧಾಕರ್, ಪುನೀತ್‌ ರಾಜಕುಮಾರ್, ಕರ್ನಾಟಕ ಪ್ರದೇಶ ಆರ್ಯಈಡಿಗರ ಸಂಘದ ಅಧ್ಯಕ್ಷ ಡಾ.ಎಂ ತಿಮ್ಮೇಗೌಡ, ಮನೋವಿಕಾಸ ಕೇಂದ್ರದ ಕಾರ್ಯದರ್ಶಿ ಎಸ್.ಬಸವರಾಜು ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಗಳಿಸಿದ ಹಣ ಎಂದಿಗೂ ನಮ್ಮದಲ್ಲ. ನಾವು ಪಡೆದದ್ದನ್ನು ಸಮಾಜಕ್ಕೆ ಹಿಂತಿರುಗಿಸಿ, ಅದರ ಋಣ ತೀರಿಸಿಕೊಳ್ಳಬೇಕು’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಗರದಲ್ಲಿಭಾನುವಾರ ‘ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜೆ.ಪಿ.ನಾರಾಯಣಸ್ವಾಮಿ ಅವರು ತಮ್ಮ ಬದುಕಿನುದ್ದಕ್ಕೂ ದುರ್ಬಲ ಜನರ ಸೇವೆಗಾಗಿಯೇ ಶ್ರಮಿಸಿದ್ದರು. ಅವರ ದಾರಿಯಲ್ಲೇ ಮಗನೂ (ಜೆ.ಪಿ.ಸುಧಾಕರ) ಸಾಗುತ್ತಿದ್ದಾನೆ. ಆರ್ಥಿಕವಾಗಿ ಹಿಂದುಳಿದ, ವಿಶೇಷ ಚೇತನ ಮಕ್ಕಳಿಗಾಗಿಯೇ ಪ್ರತಿಷ್ಠಾನಆರಂಭಿಸಲಾಗಿದೆ’ ಎಂದರು.

ADVERTISEMENT

ನಟ ಪುನೀತ್‌ ರಾಜಕುಮಾರ್, ‘ಯಾರೇ ಆಗಲಿ ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡಿ, ನೂರಾರು ಜನರ ಬಾಳಿಗೆ ಬೆಳಕಾಗಿ’ ಎಂದರು.

ಪ್ರತಿಷ್ಠಾನದ ಗ್ರಂಥಾಲಯವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. ವಿಶೇಷ ಮಕ್ಕಳನ್ನು ಗುರುತಿಸಿ ಅವರಿಗೆ ಆರ್ಥಿಕ ಮತ್ತು ಶೈಕ್ಷಣಿಕ ಸೌಲಭ್ಯ ನೀಡುವುದಾಗಿ ಪ್ರತಿಷ್ಠಾನ ಪ್ರಕಟಿಸಿತು. ಆರು ಮಕ್ಕಳಿಗೆ ತಲಾ ₹5 ಸಾವಿರ ವಿತರಿಸಲಾಯಿತು.

‘ಆರ್ಥಿಕವಾಗಿ ಹಿಂದುಳಿದ ಬಡಮಕ್ಕಳ ಕಂಡುಬಂದಲ್ಲಿ ತಿಳಿಸಿ. ಅವರಿಗೂ ನೆರವು ಸಿಗುವಂತಾಗಲಿ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ನಾರಾಯಣಸ್ವಾಮಿ ತಿಳಿಸಿದರು.

₹ 7.5 ಲಕ್ಷ ನೆರವು: ನಗರದ ಮಾತೃಶ್ರೀ ಮನೋವಿಕಾಸ ಕೇಂದ್ರದ ಬುದ್ಧಿಮಾಂದ್ಯ ಮಕ್ಕಳಿಗೆ ಒಂದು ವರ್ಷಕ್ಕಾಗುವಷ್ಟು ಸಮವಸ್ತ್ರ ಮತ್ತು ಊಟದ ಖರ್ಚಿಗೆ ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ಸುಧಾಕರ ಅವರು ₹ 7.5 ಲಕ್ಷ ನೆರವು ನೀಡಿದರು. ಬಳಿಕ ಆರ್‌.ಎಲ್‌.ಜಾಲಪ್ಪ ಟ್ರಸ್ಟ್‌ ₹ 1 ಲಕ್ಷ ನೆರವು ಪ್ರಕಟಿಸಿತು.

358 ಬಡ ವಿದ್ಯಾರ್ಥಿಗಳಿಗೆ ಪ್ರತಿಷ್ಠಾನದಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವಾರ್ಷಿಕ ₹ 20.65 ಲಕ್ಷ ವಿದ್ಯಾರ್ಥಿವೇತನ ವಿತರಿಸುವುದಾಗಿಯೂ ಪ್ರತಿಷ್ಠಾನವು ಘೋಷಿಸಿತು. (‍ಪದವಿ ₹ 5 ಸಾವಿರ, ಸ್ನಾತಕೋತ್ತರ ₹ 10, ಮೆಡಿಕಲ್, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹ 15 ಸಾವಿರ ವಿದ್ಯಾರ್ಥಿವೇತನ). ಮೈಕ್ರೊಬಯಾಲಜಿಯಲ್ಲಿ ಮೊದಲ ರ‍್ಯಾಂಕ್‌ ಪಡೆದಿದ್ದ ಪ್ರಿಯಾಂಕ ಅವರನ್ನು ಸನ್ಮಾನಿಸಲಾಯಿತು.

ಸಾಧಕರಿಗೆ ಸನ್ಮಾನ: ಲಕ್ಷ್ಮೀನರಸಯ್ಯ (ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ), ಎ.ಆರ್‌.ರಾಮಯ್ಯ (ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ), ಅಂಜಯ್ಯ (ಸಮಾಜದ ಹಿರಿಯರು), ಜಗದೀಶ (ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ), ಪರಶುರಾಮ್ (ಹಾವೇರಿ ಜಿಲ್ಲಾ ‍ಪೊಲೀಸ್‌ ವರಿಷ್ಠಾಧಿಕಾರಿ).

104ರಲ್ಲೂ ಸ್ವಂತ ದುಡಿಮೆ ನಂಬಿರುವ ಲಿಂಗಮ್ಮ

ಮಂಡ್ಯದ ಲಿಂಗಮ್ಮ (104) ಎಂಬುವವರಿಗೆ ಪ್ರತಿಷ್ಠಾನದಿಂದ ಪ್ರತಿ ತಿಂಗಳು ಮಾಸಾಶನ ನೀಡುವುದಾಗಿ ಪ್ರತಿಷ್ಠಾನವು ಪ್ರಕಟಿಸಿತು.

ಇದ್ದ ಒಬ್ಬ ಮಗನನ್ನು ಕಳೆದುಕೊಂಡಿರುವ ಲಿಂಗಮ್ಮ, ಈ ವಯಸ್ಸಿನಲ್ಲೂ ಜೀವನದ ಬಂಡಿ ಮುನ್ನೆಡೆಸಲು ಸ್ವಂತ ದುಡಿಮೆಯನ್ನೇ ನೆಚ್ಚಿಕೊಂಡಿದ್ದಾರೆ. ಅವರು ಮಂಡ್ಯದ ಮಹಾವೀರ ಚಿತ್ರಮಂದಿರದ ಬಳಿ ನಿತ್ಯ ಕಡಲೆಕಾಯಿ ವ್ಯಾಪಾರ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.