ADVERTISEMENT

ಕಿರಿಯ ಎಂಜಿನಿಯರ್‌ ಹುದ್ದೆ: ನೇಮಕಾತಿ ಆದೇಶ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 19:07 IST
Last Updated 7 ಜನವರಿ 2021, 19:07 IST
 ಕೆಪಿಎಸ್‌ಸಿ
ಕೆಪಿಎಸ್‌ಸಿ   

ಬೆಂಗಳೂರು: ಕೆಪಿಎಸ್‌ಸಿಯಿಂದ ಅಂತಿಮ ಆಯ್ಕೆಪಟ್ಟಿ ಪ್ರಕಟವಾಗಿ ವರ್ಷವಾದರೂ ಪ್ರಕ್ರಿಯೆ ಮುಂದುವರಿದಿಲ್ಲ. ನೇಮಕಾತಿ ಆದೇಶ ನೀಡಲು ಪೌರಾಡಳಿತ ಇಲಾಖೆಗೆ ಸೂಚನೆ ನೀಡಬೇಕು ಎಂದು ಕಿರಿಯ ಎಂಜಿನಿಯರ್‌ ಹುದ್ದೆ ಆಕಾಂಕ್ಷಿಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗವು ಈ ಹುದ್ದೆಗಳಿಗೆ ಪರೀಕ್ಷೆ ನಡೆಸಿ, ವರ್ಷದ ಹಿಂದೆಯೇ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಿದೆ. ಪೌರಾಡಳಿಯ ಇಲಾಖೆಯ ಮಹಾನಗರ ಪಾಲಿಕೆಯ ಕಿರಿಯ ಎಂಜಿನಿಯರ್‌ ಹುದ್ದೆಯ ಆಯ್ಕೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದ ಆಯೋಗವು ಪೊಲೀಸ್ ಪರಿಶೀಲನೆ, ಅಂಕಪಟ್ಟಿ ದೃಢೀಕರಣ, ಸಿಂಧುತ್ವ ಮುಗಿಸಿಯೂ ಆಗಿದೆ. ಆದರೂ ಹಣಕಾಸು ಇಲಾಖೆ ಅನುಮೋದನೆ ದೊರೆತಿಲ್ಲ ಎಂದು ಆಕಾಂಕ್ಷಿಗಳು ಅಳಲು ತೋಡಿಕೊಂಡಿದ್ದಾರೆ.

‘ಕಿರಿಯ ಎಂಜಿನಿಯರ್‌ ಹುದ್ದೆಗೆ ನಮ್ಮ ಮೂಲ ಅಂಕಪಟ್ಟಿಗಳನ್ನು ಇಲಾಖೆಗೆ ಕೊಟ್ಟಿದ್ದೇವೆ. ಈಗ ಬೇರೆ ಕೆಲಸಕ್ಕೂ ಹೋಗಲಾಗದೆ ತೊಂದರೆ ಅನುಭವಿಸಬೇಕಾಗಿದೆ’ ಎಂದು ಆಕಾಂಕ್ಷಿತರು ಹೇಳಿದ್ದಾರೆ.

ADVERTISEMENT

‘ಕೋವಿಡ್‌ನಿಂದ ಸಂಕಷ್ಟ ಎದುರಾಗಿದೆ. ಬೇರೆ ಉದ್ಯೋಗ ಮಾಡಲು ಆಗುತ್ತಿಲ್ಲ. ವಿದ್ಯಾಭ್ಯಾಸಕ್ಕಾಗಿ ಬ್ಯಾಂಕಿನಿಂದ ಪಡೆದಿದ್ದ ಸಾಲ ಕಟ್ಟಲೂ ಆಗುತ್ತಿಲ್ಲ’ ಎಂದು ಅಭ್ಯರ್ಥಿಗಳು ಹೇಳಿದ್ದಾರೆ.

ಈ ಹುದ್ದೆಗೆ ಸಂಬಂಧಿಸಿದಂತೆ ನೇಮಕಾತಿ ಆದೇಶ ನೀಡಬೇಕು ಎಂದು ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಡಿ.8ರಂದು ಸೂಚನೆ ನೀಡಿದೆ. ಕಿರಿಯ ಎಂಜಿನಿಯರ್‌ ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಇರುವ ಆರ್ಥಿಕ ಇಲಾಖೆಯ ನಿರ್ಬಂಧವನ್ನು ಸಡಿಲಿಸಿ ನೇಮಕಾತಿ ಆದೇಶ ನೀಡಲು ಪೌರಾಡಳಿತ ಇಲಾಖೆಗೆ ಸೂಚಿಸಬೇಕು ಎಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.