ADVERTISEMENT

ಇಂದಿನಿಂದ ‘ಅಂತರ್ಜಲ ಚೇತನ’ ಯೋಜನೆ ಜಾರಿ

​ಪ್ರಜಾವಾಣಿ ವಾರ್ತೆ
Published 5 ಮೇ 2020, 20:54 IST
Last Updated 5 ಮೇ 2020, 20:54 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಬೆಂಗಳೂರು: ‘ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನರೇಗಾ ಮೂಲಕ ಅನುಷ್ಠಾನಗೊಳಿಸಲಿರುವ ‘ಅಂತರ್ಜಲ ಚೇತನ’ ಯೋಜನೆಗೆ ಪೈಲಟ್‌ ಯೋಜನೆಯ ರೂಪದಲ್ಲಿ ಶಿವಮೊಗ್ಗದಲ್ಲಿ ಬುಧವಾರ ಚಾಲನೆ ನೀಡಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಶಿವಮೊಗ್ಗದ 273 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಯೋಜನೆ ‘ಆರ್ಟ್ ಆಫ್ ಲೀವಿಂಗ್’ ಸಹಭಾಗಿತ್ವದಲ್ಲಿ ಅನುಷ್ಠಾನಕ್ಕೆ ಬರಲಿದೆ. ರಾಜ್ಯದ ಸಮಗ್ರ ಅಂತರ್ಜಲ ಸುಧಾರಣೆಗೆ ಇದು ಸಹಕಾರಿಯಾಗಲಿದೆ’ ಎಂದು ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಯಾದಗಿರಿ, ಬಳ್ಳಾರಿ, ಉತ್ತರ ಕನ್ನಡ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ 10 ದಿನದೊಳಗೆ ಕ್ರಿಯಾಯೋಜನೆ ರೂಪಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಜೂನ್‌ ವೇಳೆಗೆ ಒಟ್ಟು 9 ಜಿಲ್ಲೆಗಳಲ್ಲಿ ಇದು ಜಾರಿಗೆ ಬರಲಿದೆ’ ಎಂದರು.

ADVERTISEMENT

‘ಬಾಯಿಗೆ ಬೀಗ ಹಾಕಿ ಮದ್ಯ ಎರೆಯಬೇಕಿತ್ತಾ?’
ಮದ್ಯ ಮಾರಾಟ ಆತುರದ ನಿರ್ಧಾರ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯಗೆ ಈಶ್ವರಪ್ಪ ತಿರುಗೇಟು ನೀಡಿದರು. ‘ಮದ್ಯ ಮಾರಾಟ ಮಾಡಿ ಎಂದು ಇವರೇ ಸಲಹೆ ನೀಡಿದ್ದರು. ಈಗ ಪೂರ್ವ ತಯಾರಿ ಮಾಡಿಲ್ಲ ಎನ್ನುತ್ತಿದ್ದಾರೆ. ಪೂರ್ವ ತಯಾರಿ ಅಂದರೆ ಏನು? ಕುಡುಕರ ಬಾಯಿಗೆ ಬೀಗ ಹಾಕಿ, ಮದ್ಯವನ್ನು ಅವರ ಬಾಯಿಗೆ ಹಾಕಬೇಕಿತ್ತಾ?’ ಎಂದು ಪ್ರಶ್ನಿಸಿದರು.

ಡಿ.ಕೆ.ಶಿವಕುಮಾರ್ ಅವರನ್ನೂ ತರಾಟೆಗೆ ತೆಗೆದುಕೊಂಡ ಅವರು, ‘ಸೋನಿಯಾ ಗಾಂಧಿ ಮೆಚ್ಚಿಸವುದಕ್ಕೆ ಡಿಕೆಶಿ ಮಾತನಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷವೊಂದು ಇದೆ ಎಂದು ತೋರಿಸವ ಪ್ರಯತ್ನವಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಪೈಪೋಟಿ ಶುರುವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.