ಬೆಂಗಳೂರು: ‘ಚಿತ್ರ ಕಲಾವಿದ ಜಿ.ಎಸ್.ಸುಜಿತ್ ಕುಮಾರ್ ಅವರ ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ ಎಂಬುದು ಸತ್ಯಕ್ಕೆ ದೂರವಾದ ಸಂಗತಿ’ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಜೆ.ಕಮಲಾಕ್ಷಿ ಸ್ಪಷ್ಟಪಡಿಸಿದ್ದಾರೆ.
ಸುಜಿತ್ ತಮ್ಮ ಕಲಾಕೃತಿಗಳ ಪ್ರದರ್ಶನವನ್ನು ಪರಿಷತ್ತು ರದ್ದುಪಡಿಸಿದೆ ಎಂದು ದೂರಿದ್ದರು.
‘ಮಾರ್ಚ್ 22ರಿಂದ 31ರವರೆಗೆ ‘ಟ್ರೂ ಬ್ಯೂಟಿ ನ್ಯೂಡ್’ ಎಂಬ ಶೀರ್ಷಿಕೆಯಲ್ಲಿ ಕಲಾಕೃತಿಗಳ ಪ್ರದರ್ಶನಕ್ಕೆ ಕಾಯ್ದಿರಿಸಿದ ಬಳಿಕ ‘ನ್ಯೂಡ್ ವಿತ್ ಮಂಗಳಸೂತ್ರ’ ಹೆಸರಿನಲ್ಲಿ ಪ್ರದರ್ಶಿಸುವುದಾಗಿ ಹೇಳಿದ್ದರು. ಈ ಕಾರಣ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು’ ಎಂದು ತಿಳಿಸಿದ್ದಾರೆ.
‘ಮೂಲ ಶೀರ್ಷಿಕೆಗೆ ಅನುಗುಣವಾಗಿ ಕಲಾಕೃತಿಗಳನ್ನು ಪ್ರದರ್ಶಿಸುವಂತೆ ಪರಿಷತ್ತು ಸೂಚಿಸಿತ್ತು. ಆಗ ಅವರು ತಮ್ಮ ಹಿಂದಿನ ಕಲಾಕೃತಿಗಳನ್ನೇ ಪ್ರದರ್ಶಿಸುವುದಾಗಿ ಮಾರ್ಚ್ 21ರಂದು ಪತ್ರ ಬರೆದಿದ್ದರು.ಅದರಂತೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ವಿಫಲರಾದ ಕಾರಣ ಅವರು ಕಾಯ್ದಿರಿಸುವಿಕೆ ಅದಾಗಿಯೆ ರದ್ದಾಗಿದೆಯೇ ಹೊರತು ಪರಿಷತ್ತು ರದ್ದು ಮಾಡಿಲ್ಲ’ ಎಂದು ಅವರು ವಿವರಿಸಿದ್ದಾರೆ.
‘ಕಲಾಪ್ರದರ್ಶನಗಳು ಜನರ ಮನಸ್ಸಿಗೆ ಮುದಕೊಡಬೇಕೇ ವಿನಾ ಅತೃಪ್ತಿ ಮತ್ತು ಅಶಾಂತಿ ಉಂಟು ಮಾಡಬಾರದು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.