ADVERTISEMENT

ಅಧಿಕಾರಿಗಳಿಗೆ ಸಚಿವ ತರಾಟೆ

‘ಕಲಾಗ್ರಾಮದ ನಿರ್ವಹಣೆ ತೃಪ್ತಿದಾಯಕವಾಗಿಲ್ಲ’

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 2:44 IST
Last Updated 31 ಅಕ್ಟೋಬರ್ 2019, 2:44 IST
ಸಿ.ಟಿ.ರವಿ ಅವರು ಕಾಮಗಾರಿ ಪರಿಶೀಲನೆ ನಡೆಸಿದರು. ಇಲಾಖೆಯ ಕಾರ್ಯದರ್ಶಿ ಆರ್.ಆರ್.ಜನ್ನು, ನಿರ್ದೇಶಕ ರಂಗಪ್ಪ ಹಾಗೂ ಅಧಿಕಾರಿಗಳು ಇದ್ದಾರೆ
ಸಿ.ಟಿ.ರವಿ ಅವರು ಕಾಮಗಾರಿ ಪರಿಶೀಲನೆ ನಡೆಸಿದರು. ಇಲಾಖೆಯ ಕಾರ್ಯದರ್ಶಿ ಆರ್.ಆರ್.ಜನ್ನು, ನಿರ್ದೇಶಕ ರಂಗಪ್ಪ ಹಾಗೂ ಅಧಿಕಾರಿಗಳು ಇದ್ದಾರೆ   

ಕೆಂಗೇರಿ: ‘ಕಲಾಗ್ರಾಮ ನಿರ್ಮಾಣವಾಗಿ 10 ವರ್ಷಗಳು ಕಳೆದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಗೊಂಡಿಲ್ಲ ಏಕೆ. ಇಲಾಖೆಗೆ ಒಳಪಡದ ಕೇಂದ್ರದ ಅಭಿವೃದ್ಧಿಗೆ ಅನುದಾನ ನೀಡಲು ತಾಂತ್ರಿಕ ತೊಂದರೆ ಉಂಟಾದರೆ ಯಾರು ಹೊಣೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ ಕಲಾಗ್ರಾಮಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

‘ಇಲಾಖೆಗೆ ಹಸ್ತಾಂತರವಾಗದೆಯೇ ಕಲಾಗ್ರಾಮದಲ್ಲಿ ಹಲವು ವರ್ಷಗಳಿಂದ ಸಾಂಸ್ಕೃತಿಕ ಚಟುವಟಿಕೆಗಳು ನಡೆಯು
ತ್ತಿವೆ. ಇದರಿಂದ ಕಲಾಗ್ರಾಮದಲ್ಲಿರುವ ಕಟ್ಟಡಗಳ ನಿರ್ವಹಣೆಯಲ್ಲಿ ಕೊರತೆ ಉಂಟಾಗಿದ್ದು, ಆಡಳಿತ ಕಚೇರಿ ಕಟ್ಟಡ ಕಾಮಗಾರಿ ಕುಂಟುತ್ತಾ ಸಾಗುವಂತಾಗಿದೆ. ಶೌಚಾಲಯ ನಿರ್ವಹಣೆಯೂ ತೀರಾ ಕೆಟ್ಟದಾಗಿದೆ. ಒಟ್ಟಾರೆ ಕಲಾ
ಗ್ರಾಮದ ನಿರ್ವಹಣೆ ತೃಪ್ತಿದಾಯಕವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಈವರೆಗೆ ನಿರ್ಮಾಣಗೊಂಡಿರುವ ಕಟ್ಟಡಗಳ ಸಂಪೂರ್ಣ ಮಾಹಿತಿ ಪಡೆದು ಮೂರನೇ ವ್ಯಕ್ತಿಯಿಂದ ಕಾಮಗಾರಿ ಗುಣಮಟ್ಟದ ವರದಿ ಪಡೆದು ಇಲಾಖೆಗೆ ಹಸ್ತಾಂತರ ಮಾಡಿಕೊಳ್ಳಲು ಪ್ರಕ್ರಿಯೆ ಆರಂಭಿಸಬೇಕು’ ಎಂದು ಇಲಾಖೆಯ ಕಾರ್ಯದರ್ಶಿ ಆರ್.ಆರ್‌.ಜನ್ನು ಅವರಿಗೆ ಸೂಚಿಸಿದರು.

‘ಕಲಾಗ್ರಾಮವನ್ನು ನಾಟಕ, ಲಲಿತಕಲೆ, ಶಿಲ್ಪಕಲೆ, ಜಾನಪದ, ಸಂಗೀತ ಕಲೆಯ ಸಮಗ್ರ ತರಬೇತಿ ಹಾಗೂ ಪ್ರದರ್ಶನ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವುದರ ಜೊತೆಗೆ ಪ್ರವಾಸಿ ಕೇಂದ್ರವನ್ನಾಗಿ ಪರಿವರ್ತಿಸಬಹುದಾಗಿದೆ. ಈ ಸಂಬಂಧ ರೂಪುರೇಷೆಗಳನ್ನು ಸಿದ್ಧಪಡಿಸಿ ನವೆಂಬರ್ ಅಂತ್ಯದೊಳಗೆ ಇಲಾಖೆಗೆ ಸಲ್ಲಿಸಬೇಕು’ ಎಂದು ಅವರು ನಿರ್ದೇಶನ ನೀಡಿದರು.

ತಡೆಗೋಡೆ, ಆಡಳಿತ ಕಚೇರಿ ಕಟ್ಟಡ ಹಾಗೂ ರಂಗಮಂದಿರ ನಿರ್ಮಾಣಕ್ಕೆ ಬೇಕಿರುವ ಹೆಚ್ಚುವರಿ ಅನುದಾನಕ್ಕೆ ಅಗತ್ಯ ದಾಖಲಾತಿ ಒದಗಿಸುವಂತೆ ಹೇಳಿದರು. ಒತ್ತುವರಿ ತಡೆಗಟ್ಟುವ ನಿಟ್ಟಿನಲ್ಲಿ ಶೀಘ್ರದಲ್ಲೇ ಕಲಾಗ್ರಾಮದ ಸರ್ವೇ ನಡೆಸಿ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಸರ್ವೇ ಕಾರ್ಯಕ್ಕೂ ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.