ADVERTISEMENT

‘ಸಾಹಿತ್ಯದ ಶಕ್ತಿ ಸಮಾಜ ಒಡೆಯಬಾರದು’: ವಿಶ್ವೇಶ್ವರ ಹೆಗಡೆ ಕಾಗೇರಿ

ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮತ *ಪದ್ಮಶ್ರೀ ಪುರಸ್ಕೃತರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸನ್ಮಾನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 16:14 IST
Last Updated 16 ಫೆಬ್ರುವರಿ 2022, 16:14 IST
‘ಪದ್ಮಶ್ರೀ ಪುರಸ್ಕೃತ’ (ಕುಳಿತವರು ಎಡದಿಂದ) ಅಬ್ದುಲ್ ಖಾದರ್ ನಡಕಟ್ಟಿನ್, ಅಮೈ ಮಹಾಲಿಂಗ ನಾಯಕ್, ಡಾ. ಸಿದ್ಧಲಿಂಗಯ್ಯ ಅವರ ಪರವಾಗಿ ಪತ್ನಿ ರಮಾ ಸಿದ್ಧಲಿಂಗಯ್ಯ ಮತ್ತು ಸುಬ್ಬಣ್ಣ ಅಯ್ಯಪ್ಪನ್ ಅವರನ್ನು ಗೌರವಿಸಲಾಯಿತು. (ನಿಂತವರು ಎಡದಿಂದ) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ ಎನ್. ಚಲವಾದಿ, ಇಲಾಖೆಯ ಕಾರ್ಯದರ್ಶಿ ಮಂಜುಳಾ ಎನ್., ಸಂಸದ ತೇಜಸ್ವಿ ಸೂರ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ವಿ. ಸುನೀಲ್ ಕುಮಾರ್ ಮತ್ತು ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಇದ್ದಾರೆ - ಪ್ರಜಾವಾಣಿ ಚಿತ್ರ
‘ಪದ್ಮಶ್ರೀ ಪುರಸ್ಕೃತ’ (ಕುಳಿತವರು ಎಡದಿಂದ) ಅಬ್ದುಲ್ ಖಾದರ್ ನಡಕಟ್ಟಿನ್, ಅಮೈ ಮಹಾಲಿಂಗ ನಾಯಕ್, ಡಾ. ಸಿದ್ಧಲಿಂಗಯ್ಯ ಅವರ ಪರವಾಗಿ ಪತ್ನಿ ರಮಾ ಸಿದ್ಧಲಿಂಗಯ್ಯ ಮತ್ತು ಸುಬ್ಬಣ್ಣ ಅಯ್ಯಪ್ಪನ್ ಅವರನ್ನು ಗೌರವಿಸಲಾಯಿತು. (ನಿಂತವರು ಎಡದಿಂದ) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ ಎನ್. ಚಲವಾದಿ, ಇಲಾಖೆಯ ಕಾರ್ಯದರ್ಶಿ ಮಂಜುಳಾ ಎನ್., ಸಂಸದ ತೇಜಸ್ವಿ ಸೂರ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ವಿ. ಸುನೀಲ್ ಕುಮಾರ್ ಮತ್ತು ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಇದ್ದಾರೆ - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮನುಷ್ಯ ಸಹಜವಾಗಿ ವೈಚಾರಿಕ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಆದರೆ, ಅದು ಇನ್ನೊಬ್ಬರ ನಡುವಿನ ಪ್ರೀತಿ ವಿಶ್ವಾಸದ ಕೊಂಡಿಯನ್ನು ಸಡಿಲ ಮಾಡಬಾರದು. ಸಾಹಿತ್ಯದ ಶಕ್ತಿಯಿದೆ ಎಂಬ ಕಾರಣಕ್ಕೆ ಅನೇಕರು ಸಮಾಜವನ್ನು ಒಡೆದು, ವಿಷಬೀಜ ಬಿತ್ತುತ್ತಾರೆ’ ಎಂದು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2022ನೇ ಸಾಲಿನ ಪದ್ಮಶ್ರೀ ಪುರಸ್ಕೃತರಿಗೆ ಅಭಿನಂದನಾ ಸಮಾರಂಭದಲ್ಲಿಅಬ್ದುಲ್ ಖಾದರ್ ನಡಕಟ್ಟಿನ್, ಅಮೈ ಮಹಾಲಿಂಗ ನಾಯಕ್, ಡಾ. ಸಿದ್ಧಲಿಂಗಯ್ಯ ಅವರ ಪರವಾಗಿ ಪತ್ನಿ ರಮಾ ಸಿದ್ಧಲಿಂಗಯ್ಯ ಮತ್ತು ಸುಬ್ಬಣ್ಣ ಅಯ್ಯಪ್ಪನ್ ಅವರನ್ನು ಗೌರವಿಸಿ ಮಾತನಾಡಿದರು.

‘ಸಮಾಜದಲ್ಲಿ ಭೇದ–ಭಾವ ನಿರ್ಮಿಸಿ, ಸ್ವಾರ್ಥ ಸಾಧಿಸಿಕೊಳ್ಳುವ ಅನೇಕರನ್ನು ನೋಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಮಗೆ ಕವಿ ಡಾ. ಸಿದ್ಧಲಿಂಗಯ್ಯ ಅಂತಹವರು ಆದರ್ಶರಾಗುತ್ತಾರೆ. ಅವರು ಸಾಹಿತ್ಯದ ಕೊಡುಗೆಯ ಮೂಲಕ ಈ ಸಮಾಜದಲ್ಲಿ ನಾವು ಅಣ್ಣ ತಮ್ಮಂದಿರ ರೀತಿ ಮುಂದೆ ಹೋಗಬೇಕೆಂದು ತೋರಿಸಿಕೊಟ್ಟರು. ಸಮಾಜಕ್ಕೆ ಈ ರೀತಿ ರಚನಾತ್ಮಕ ಕೊಡುಗೆ ನೀಡಬೇಕು’ ಎಂದು ಹೇಳಿದರು.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಸಚಿವವಿ. ಸುನೀಲ್ ಕುಮಾರ್, ‘ಕೇಂದ್ರ ಸರ್ಕಾರ ಈ ವರ್ಷ ಕರ್ನಾಟಕದ ಐವರನ್ನು ‘ಪ್ರದ್ಮಶ್ರೀ ಪ್ರಶಸ್ತಿ’ಗೆ ಆಯ್ಕೆ ಮಾಡಿದೆ. ದೊಡ್ಡ ಪ್ರಮಾಣದಲ್ಲಿ ಪರಿಚಯ ಆಗದ ಮೌನ ಸಾಧಕರನ್ನು ಈ ಪ್ರಶಸ್ತಿಗೆ ಪುರಸ್ಕರಿಸಲಾಗುತ್ತಿದೆ. ಇದರಿಂದ ಪ್ರಶಸ್ತಿಯ ಮೌಲ್ಯವೂ ಹೆಚ್ಚುತ್ತಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ‘ಅಮೃತ ಭಾರತಿಗೆ ಕನ್ನಡದ ಆರತಿ’ ಎಂಬ ಶೀರ್ಷಿಕೆಯಡಿ ವರ್ಷಪೂರ್ತಿ ಕಾರ್ಯಕ್ರಮ ನಡೆಸಲಾಗುವುದು’ ಎಂದು ಹೇಳಿದರು.

‘ಕೃಷಿ ಆವಿಷ್ಕಾರಕ್ಕೆ ಆದ್ಯತೆ ಸಿಗಲಿ’

‘ಕೃಷಿ ಕ್ಷೇತ್ರದಲ್ಲಿ ನಡೆಸಿದ ಆವಿಷ್ಕಾರ ಗುರುತಿಸಲಾಗಿದೆ. ಪ್ರಶಸ್ತಿ ಬಂದಿದೆ ಎಂದಾಗ ನಂಬಲು ಸಾಧ್ಯವಾಗಲಿಲ್ಲ. ನಮ್ಮ ದೇಶ ಅಭಿವೃದ್ಧಿಯಾಗಬೇಕಾದರೆ ರೈತರಿಗೆ ಪ್ರೋತ್ಸಾಹ ನೀಡಬೇಕು. ಕೃಷಿ ಚಟುವಟಿಕೆಗೆ ಸಹಕಾರಿಯಾಗುವ ಯಂತ್ರಗಳನ್ನು ಆವಿಷ್ಕಾರ ಮಾಡಬೇಕು. ಯಾವ ವ್ಯಕ್ತಿಯಿಂದ ದೇಶಕ್ಕೆ ಒಳ್ಳೆಯದಾಗುತ್ತದೆಯೋ ಅಂತಹವರನ್ನು ಗುರುತಿಸಿದರೆ ದೇಶ ಇನ್ನಷ್ಟು ಪ್ರಗತಿ ಹೊಂದಲಿದೆ’ ಎಂದು ‘ಪದ್ಮಶ್ರೀ ಪ್ರಶಸ್ತಿ’ ಪುರಸ್ಕೃತಅಬ್ದುಲ್ ಖಾದರ್ ನಡಕಟ್ಟಿನ್ ತಿಳಿಸಿದರು.

ಸುಬ್ಬಣ್ಣ ಅಯ್ಯಪ್ಪನ್, ‘ಜೀವನದಲ್ಲಿ ಅರ್ಧಕ್ಕೂ ಅಧಿಕ ವರ್ಷ ಕರ್ನಾಟಕದ ಹೊರಗಡೆಯೇ ಇರಬೇಕಾಯಿತು. ಎಲ್ಲಿಯೇ ಹೋದರೂ ಕರ್ನಾಟಕದವನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆ. ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.