ಬೆಂಗಳೂರು: ‘ಅಪರಾಧ ಕೃತ್ಯದ ಸ್ವರೂಪ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಸ್ವರೂಪ ಪಡೆದುಕೊಳ್ಳುತ್ತಿವೆ’ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಿ.ವಿ.ಗುರುಪ್ರಸಾದ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡರು.
‘ಆರೋಪಿಗಳು ಸದ್ಯ ಡಿಜಿಟಲ್ ಬಂಧನದ ಹೆಸರಿನಲ್ಲಿ ಕೋಟ್ಯಂತರ ಹಣ ಲೂಟಿ ಮಾಡುತ್ತಿದ್ದಾರೆ. ಮನೆಗಳಲ್ಲಿ ಕಳವು ಕಡಿಮೆ ಆಗುತ್ತಿದ್ದು, ಡಿಜಿಟಲ್ ಅಪರಾಧಗಳ ಹೆಚ್ಚಾಗಿವೆ. ಕೊಲೆ, ದರೋಡೆ, ಅತ್ಯಾಚಾರ ಹಿಂದಿನ ರೀತಿಯಲ್ಲಿ ನಡೆಯುತ್ತಿವೆ’ ಎಂದರು.
‘ಈಗ ಬೀಭತ್ಸ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಿವೆ. ಇತ್ತೀಚೆಗೆ ಮಲ್ಲೇಶ್ವರದಲ್ಲಿ ಮಹಿಳೆ ದೇಹವನ್ನು 60 ತುಂಡುಗಳಾಗಿ ಕತ್ತರಿಸಿ ಕೊಲೆ ಮಾಡಲಾಗಿತ್ತು. ನಾವು ನೌಕರಿಗೆ ಸೇರುವಾಗ ಇಂತಹ ಕೃತ್ಯಗಳ ಬಗ್ಗೆ ಕೇಳಿರಲಿಲ್ಲ. ಈಗ ಮಾಮೂಲಿಯಾಗಿವೆ‘ ಎಂದರು.
‘ನಾನು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಇದ್ದಾಗ ಸರ್ಕಾರದ ಮುಖ್ಯಕಾರ್ಯದರ್ಶಿಯೊಬ್ಬರ ಮನೆ ಮೇಲೆ ದಾಳಿ ಮಾಡಲಾಗಿತ್ತು. ಅಲ್ಲಿ ಸಿಕ್ಕ ಹಣದಲ್ಲಿ ಶೇ 50ರಷ್ಟು ನನಗೆ ಆಮಿಷ ಒಡ್ಡಿದ್ದರು. ಆ ಮಾಹಿತಿಯನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದೆ’ ಎಂದು ಸ್ಮರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ಬನಶಂಕರಿ ಅಂಗಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.