ಬೆಂಗಳೂರು: ‘ಸಾಹಿತ್ಯ ವ್ಯಕ್ತಿತ್ವವನ್ನುಬೆಳೆಸುವ ಕೆಲಸ ಮಾಡುತ್ತದೆ.ಪುಸ್ತಕಗಳು ಒಳಗಿನ ಅಂಧಕಾರವನ್ನು ಹೋಗಲಾಡಿಸುತ್ತವೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಶನಿವಾರ ಅಭಿಪ್ರಾಯಪಟ್ಟರು.
ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಾಶನ ಸಂಸ್ಥೆಯು ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ‘ಕನ್ನಡ ಪುಸ್ತಕ ಹಬ್ಬ’ ಪುಸ್ತಕಗಳ ಮಾರಾಟ ಮತ್ತು ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಾಶನ 55ಕ್ಕೂ ಹೆಚ್ಚು ವರ್ಷಗಳಿಂದ ರಾಷ್ಟ್ರೀಯತೆಯನ್ನು ಬಿತ್ತುವ ಕಾರ್ಯವನ್ನು ಮಾಡುತ್ತಿದೆ. ಹಾಗಾಗಿ, ನವ್ಯ, ನವೋದಯ ಮುಂತಾದ ಕನ್ನಡ ಸಾಹಿತ್ಯದ ವಿವಿಧ ಧಾರೆಗಳಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ್ದೂ ಬಹುಮುಖ್ಯವಾದ ಧಾರೆ. ಇದನ್ನು ಗುರುತಿಸಿ, ಚರ್ಚೆ ನಡೆಸುವ ಅಗತ್ಯವಿದೆ’ ಎಂದರು.
ಪತ್ರಕರ್ತ ಜೋಗಿ,‘ಪುಸ್ತಕ ಓದುವುದರಿಂದ ವ್ಯಕ್ತಿಯ ಏಳಿಗೆ ಸಾಧ್ಯ. ಓದು ಬದುಕನ್ನು ವಿಸ್ತರಿಸುತ್ತದೆ. ಹಾಗಾಗಿ, ಓದು ವ್ಯಕ್ತಿತ್ವದ ಭಾಗವಾಗಬೇಕು.ಜಗತ್ತಿನ ನೂರು ಬದುಕುಗಳನ್ನು ಅನುಭವಿಸಲು ಪುಸ್ತಕ ಓದಬೇಕು’ ಎಂದರು.
ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ ಮಾತನಾಡಿದರು.
ನ.28ರವರೆಗೆ ಪುಸ್ತಕ ಹಬ್ಬ:‘ಕನ್ನಡ ಪುಸ್ತಕ ಹಬ್ಬ’ದ ಪ್ರದರ್ಶನ ಮತ್ತು ಮಾರಾಟ ನ.28ರವರೆಗೆ ನಡೆಯಲಿದೆ. ವಾರಾಂತ್ಯದಲ್ಲಿ ವಿಶೇಷ ಉಪನ್ಯಾಸಗಳು, ಪುಸ್ತಕ ಲೋಕಾರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಮೂರು ಸಾವಿರಕ್ಕೂಅಧಿಕ ಪುಸ್ತಕಗಳು ಲಭ್ಯವಿದ್ದು, ರಾಷ್ಟ್ರೋತ್ಥಾನ ಸಾಹಿತ್ಯದ ಪುಸ್ತಕಗಳಿಗೆ ಶೇ 40ರಷ್ಟು ರಿಯಾಯಿತಿ ಹಾಗೂ ಇತರ ಪ್ರಕಾಶಕರ ಪುಸ್ತಕಗಳಿಗೆ ಶೇ 20ರಷ್ಟು ರಿಯಾಯಿತಿ ಲಭ್ಯ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.