ಬೆಂಗಳೂರು: ಸರ್ಕಾರದ ಜಾಲ ತಾಣಗಳಿಗೆ ಕನ್ನಡ ಲಿಪಿಯ ವೆಬ್ ವಿಳಾಸ ಜಾರಿಗೊಳಿಸುವ ಜತೆಗೆವಿ-ಅಂಚೆಯನ್ನು ಪರಿಚಯಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಅವರನ್ನು ಶುಕ್ರವಾರ ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಿದರು. ‘ಉಳಿದ ರಾಜ್ಯಗಳಿಗೆ ಮಾದರಿಯಾಗುವ ರೀತಿಯಲ್ಲಿ ರಾಜ್ಯ ಸರ್ಕಾರ ತಂತ್ರಜ್ಞಾನವನ್ನು ಆಡಳಿತದಲ್ಲಿ ಅಳವಡಿಸಿಕೊಂಡಿದೆ. ಅದೇ ರೀತಿ, ಇಲ್ಲಿನ ಭಾಷೆಯನ್ನು ಕೂಡ ಬಳಸುವ ಮೂಲಕ ಕನ್ನಡಕ್ಕೆ ವಿಶ್ವಮಾನ್ಯತೆ ದೊರಕಿಸಿಕೊಡಬೇಕಾಗಿದೆ. ‘ಕರ್ನಾಟಕ.ಭಾರತ’ ಎಂಬ ವೆಬ್ ವಿಳಾಸವನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಬಳಕೆಗಾಗಿಯೇ ಮೀಸಲಿಟ್ಟಿದೆ. ಹಾಗಾಗಿ ಇದನ್ನು ಪಡೆ ಯುವಂತೆ ಇ–ಆಡಳಿತ ಇಲಾಖೆಗೆ ಸೂಚಿಸಬೇಕು’ ಎಂದು ಮನವಿ ಮಾಡಿಕೊಂಡರು.
‘ವೆಬ್ ವಿಳಾಸ ಒದಗಿಸಲು ‘ಕರ್ನಾಟಕ.ಭಾರತ’ ಮತ್ತು ‘.ಕರ್ನಾಟಕ’ವನ್ನು ಇ–ಆಡಳಿತ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು. ಇದರಿಂದ ಕನ್ನಡ ಲಿಪಿಯ ಮೂಲಕವೇ ಸರ್ಕಾರದ ಎಲ್ಲ ಜಾಲತಾಣಗಳನ್ನೂ ರೂಪಿಸಬಹುದಾಗಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.