ಬೆಂಗಳೂರು: 'ಪಾರ್ಟಿ, ಪಬ್ ಎಂದೆಲ್ಲ ಸುತ್ತುತ್ತಾ, ತನ್ನ ಮೋಜಿನ ಜೀವನಕ್ಕಾಗಿ ಫ್ಲ್ಯಾಟ್ನ ಭೋಗ್ಯದ ಹಣದೊಂದಿಗೆ ಪರಾರಿಯಾಗಲು ಸಂಚು ರೂಪಿಸಿದ್ದಳು. ಅವಳ ವರ್ತನೆಯಿಂದ ಬೇಸತ್ತು ಚಾಕುವಿನಿಂದ ಹಲ್ಲೆ ಮಾಡಿದೆ’ ಎಂದು ಪೊಲೀಸ್ ವಿಚಾರಣೆ ವೇಳೆ ಕಿರುತೆರೆ ನಟಿ ಸಿ.ಮಂಜುಳಾ ಅವರ ಪತಿ ಅಮರೇಶ್ ಹೇಳಿಕೆ ನೀಡಿದ್ದಾರೆ.
ಕೌಟುಂಬಿಕ ಕಲಹ ವಿಚಾರಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ, ನಿರೂಪಕಿ ಸಿ. ಮಂಜುಳಾ ಅಲಿಯಾಸ್ ಶ್ರುತಿ ಅವರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪ ಸಂಬಂಧ ಪತಿ ಅಮರೇಶ್ನನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದರು.
‘ಅಮೃತಧಾರೆ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಮಂಜುಳಾ ಮತ್ತು ನಾನು 20 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ನನ್ನ ಮತ್ತು ಮಕ್ಕಳ ಬಗ್ಗೆ ಕಾಳಜಿ ಮಾಡುತ್ತಿರಲಿಲ್ಲ. ಶ್ರೀನಗರದಲ್ಲಿ ಮನೆಯನ್ನು ಭೋಗ್ಯಕ್ಕೆ ಹಾಕಿಕೊಂಡು ವಾಸ ಮಾಡುತ್ತಿದ್ದೆವು. ಹೆಣ್ಣುಮಕ್ಕಳಿಗೆ ತಾಯಿ ಪ್ರೀತಿಯನ್ನೇ ಕೊಟ್ಟಿಲ್ಲ’ ಎಂದು ಹೇಳಿದ್ದಾರೆ.
‘ಮನೆ ಜವಾಬ್ದಾರಿಯನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಶೂಟಿಂಗ್ ನೆಪದಲ್ಲಿ ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ಪಾರ್ಟಿ, ಪಬ್ ಎಂದೆಲ್ಲ ಸುತ್ತುತ್ತಾ ಮಧ್ಯರಾತ್ರಿ ಮನೆಗೆ ಬರುತ್ತಿದ್ದಳು. ಒಮ್ಮೊಮ್ಮೆ ಮನೆಯಿಂದ ಹೊರಹೋದರೆ 15 ದಿನಗಳಾದರೂ ವಾಪಸ್ ಬರುತ್ತಿರಲಿಲ್ಲ. ಕೆಲ ದಿನಗಳ ಹಿಂದೆ ಯಾರಿಗೂ ಹೇಳದೇ 15 ದಿನ ಪ್ರಯಾಗರಾಜ್ಗೆ ಹೋಗಿದ್ದಳು. ಈ ವಿಚಾರಕ್ಕೆ ನಮ್ಮಿಬ್ಬರ ನಡುವೆ ಗಲಾಟೆ ಆಗಿತ್ತು’ ಎಂದು ಆರೋಪಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಗೊತ್ತಾಗಿದೆ.
‘ಗಂಡ, ಮಕ್ಕಳು ಇದ್ದರೂ ಅಣ್ಣನ ಜೊತೆ ಇರುವುದಾಗಿ ಗಲಾಟೆ ಮಾಡುತ್ತಿದ್ದಳು. ಕಾಲೇಜಿಗೆ ಹೋಗುವ ಮಕ್ಕಳು ಇದ್ದ ಕಾರಣ ₹25 ಲಕ್ಷ ನೀಡಿ ಫ್ಲ್ಯಾಟ್ ಒಂದನ್ನು ಭೋಗ್ಯಕ್ಕೆ ಹಾಕಿಸಿಕೊಂಡಿದ್ದೆ. ಭೋಗ್ಯಕ್ಕಿದ್ದ ಫ್ಲ್ಯಾಟ್ ಖಾಲಿ ಮಾಡಿ, ಆ ಹಣದೊಂದಿಗೆ ಪರಾರಿಯಾಗಲು ಸಂಚು ರೂಪಿಸಿದ್ದಳು. ಇದಕ್ಕೆ ನಾನು ಒಪ್ಪದಿದ್ದಾಗ ನನ್ನ ಮೇಲೆ ಪೊಲೀಸರಿಗೆ ದೂರು ನೀಡಿದ್ದಳು. ಇದೇ ವಿಚಾರಕ್ಕೆ ಮತ್ತೆ ಜಗಳವಾದಾಗ, ತಾಳ್ಮೆ ಕಳೆದುಕೊಂಡು ಚಾಕುವಿನಿಂದ ಹಲ್ಲೆ ನಡೆಸಿದ್ದೇನೆ’ ಎಂದು ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಹಲ್ಲೆಯಿಂದ ಗಾಯಗೊಂಡಿರುವ ಮಂಜುಳಾ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.