
ಸಮಾರಂಭದಲ್ಲಿ ಸಮ್ಮೇಳನ ಅಧ್ಯಕ್ಷ ಎಂ.ಆರ್. ಉಪೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಿದ್ಧಲಿಂಗಸ್ವಾಮಿ, ವಿ. ನಿಶಾ ಗೋಪಿನಾಥ್ ಅವರಿಗೆ ಪುನೀತ್ ರಾಜಕುಮಾರ್ ಯುವ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರು: ‘ಕನ್ನಡ ಭಾಷೆ, ಸಾಹಿತ್ಯ ಹಾಗೂ ನಮ್ಮ ಸಂಸ್ಕೃತಿಯ ಬೆಳವಣಿಗೆಗೆ ಯುವ ಮನಸುಗಳನ್ನು ಬೆಸೆಯುವ ಸಂಘ–ಸಂಸ್ಥೆಗಳ ಸಂಖ್ಯೆ ಹೆಚ್ಚಾಗಬೇಕು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.
ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಸುಮಂಗಲಿ ಸೇವಾಶ್ರಮ ಹಾಗೂ ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ 10ನೇ ಯುವಜನ ಸಾಹಿತ್ಯ ಸಂಸ್ಕೃತಿ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕನ್ನಡ ಭಾಷೆಯ ಬೆಳವಣಿಗೆಗೆ ಯುವಕರನ್ನು ಸನ್ನದುಗೊಳಿಸುವುದು ಇಂದಿನ ತುರ್ತು ಕೆಲಸವಾಗಿದೆ. ಈ ನಿಟ್ಟಿನಲ್ಲಿ 25 ವರ್ಷಗಳಿಂದ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಕೆಲಸ ಮಾಡುತ್ತಿದೆ. ಕಾವ್ಯ, ಕಥಾ–ಕಮ್ಮಟ, ಯುವಜನ ಮೇಳ, ಮಹಿಳಾ ಸಾಂಸ್ಕೃತಿಕ ಸಮಾವೇಶಗಳನ್ನು ಆಯೋಜಿಸುತ್ತಿದೆ. ಸರ್ಕಾರದ ನೆರವು ಪಡೆಯದೇ ಕನ್ನಡ ಸಾಹಿತ್ಯದ ಬೆಳವಣಿಗೆಗೆ ದುಡಿಯುತ್ತಿದೆ’ ಎಂದು ಶ್ಲಾಘಿಸಿದರು.
‘ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಯುವ ಸಾಹಿತ್ಯ ದತ್ತಿ ಪ್ರಶಸ್ತಿ’ಯನ್ನು ಲೇಖಕಿ ವಿ. ನಿಶಾ ಗೋಪಿನಾಥ್ ಹಾಗೂ ಉಪನ್ಯಾಸಕ ಸಿದ್ಧಲಿಂಗಸ್ವಾಮಿ ಅವರಿಗೆ ಪ್ರದಾನ ಮಾಡಲಾಯಿತು. ‘ಪ್ರಜಾವಾಣಿ’ ಪತ್ರಿಕೆಯ ಹಿರಿಯ ಛಾಯಾಗ್ರಾಹಕ ಎಂ.ಎಸ್. ಮಂಜುನಾಥ್, ಪ್ರಾಧ್ಯಾಪಕ ಪಾರ್ಶ್ವನಾಥ್, ಸಮಾಜ ಸೇವಕ ಡ್ಯಾನಿಯಲ್ ಪಿ., ಎಸ್. ರಾಧಾಕೃಷ್ಣ, ರೂಪಾ ಗೌಡ, ಪತ್ರಕರ್ತೆ ಮಾಲಾ ಹಾಸನ, ಎಂ. ಅಂಬರೀಶ್ ಹಾಗೂ ಪರಿಸರ ಮಂಜು ಅವರಿಗೆ ‘ಕುವೆಂಪು ಶ್ರೀ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.