ADVERTISEMENT

ಬೆಂಗಳೂರಿನ ಕೆರೆ ಅಭಿವೃದ್ಧಿ ಅಯೋಧ್ಯೆಗೂ ಮಾದರಿ

ರಾಮಮಂದಿರದ ಸುತ್ತಲಿನ ಕುಂಡ್‌ಗಳ ಪುನಶ್ಚೇತನಕ್ಕೆ ಕನ್ನಡಿಗ ಆನಂದ ಮಲ್ಲಿಗವಾಡ ಮಾರ್ಗದರ್ಶನ

Published 31 ಜುಲೈ 2022, 20:15 IST
Last Updated 31 ಜುಲೈ 2022, 20:15 IST
ಅಯೋಧ್ಯೆಯ ಸೂರ್ಯ ಕುಂಡ್‌ ಪುನಶ್ಚೇತನದ ಸಂದರ್ಭದಲ್ಲಿ ಸ್ಥಳೀಯ ಎಂಜಿನಿಯರ್‌ಗಳ ಜೊತೆ ಆನಂದ ಮಲ್ಲಿಗವಾಡ (ಕೊನೆಯವರು)
ಅಯೋಧ್ಯೆಯ ಸೂರ್ಯ ಕುಂಡ್‌ ಪುನಶ್ಚೇತನದ ಸಂದರ್ಭದಲ್ಲಿ ಸ್ಥಳೀಯ ಎಂಜಿನಿಯರ್‌ಗಳ ಜೊತೆ ಆನಂದ ಮಲ್ಲಿಗವಾಡ (ಕೊನೆಯವರು)   

ಬೆಂಗಳೂರು: ‘ಕೆರೆಗಳ ನಗರಿ’ಯಾಗಿದ್ದ ಬೆಂಗಳೂರು ನೂರಾರು ಕೆರೆಗಳನ್ನು ಕಳೆದುಕೊಂಡಿದ್ದರೂ ರಾಜಧಾನಿಯಲ್ಲಿ ‘ಕೆರೆಗಳ ನೈಸರ್ಗಿಕ ಅಭಿವೃದ್ಧಿ’ ಈಗ ಅನ್ಯರಾಜ್ಯಗಳಿಗೂ ಮಾದರಿಯಾಗಿದೆ. ಈ ಪ್ರಯೋಗ ದೂರದ ಅಯೋಧ್ಯೆ ನಗರವನ್ನು ಸೆಳೆದಿದೆ.

ಇದಕ್ಕೆಲ್ಲ ಕಾರಣ ಆನಂದ ಮಲ್ಲಿಗವಾಡ. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ನಿಧಿಯಲ್ಲಿ ಬೆಂಗಳೂರಿನ ಆನೇಕಲ್‌ ತಾಲ್ಲೂಕಿನಲ್ಲಿ 20ಕ್ಕೂ ಹೆಚ್ಚು ಕೆರೆಗಳನ್ನು ಸಹಜವಾಗಿ, ಅಲ್ಪಾವಧಿಯಲ್ಲಿ ಅಭಿವೃದ್ಧಿ ಪಡಿಸಿರುವ ಹೆಗ್ಗಳಿಕೆ ಇವರದ್ದು. ಅಯೋಧ್ಯೆಯ ಆರು ಕೆರೆ ಹಾಗೂ ರಾಮಮಂದಿರ ಸುತ್ತಮುತ್ತಲಿನ ಎಂಟು ಕುಂಡ್‌ಗಳ ಅಭಿವೃದ್ಧಿಗೆ ಇವರು ಮಾರ್ಗದರ್ಶಕರಾಗಿದ್ದಾರೆ.

ನೈಸರ್ಗಿಕವಾಗಿ ಕಲ್ಮಶವನ್ನೂ ಬೇರ್ಪಡಿಸುವ ಜತೆಗೆ, ಕಬ್ಬಿಣ ಮತ್ತು ಸಿಮೆಂಟ್‌ ಅನ್ನು ಹೆಚ್ಚು ಬಳಸದೆಬೆಂಗಳೂರಿನ ಕೆರೆಗಳನ್ನು ಮೂರ್ನಾಲ್ಕು ತಿಂಗಳಲ್ಲಿ ಈ ಮಾಹಿತಿ ತಿಳಿದ ಅಯೋಧ್ಯೆಯ ಯಶ್‌ ಪಕ್ಕಾ ಪೇಪರ್‌ ಕಂಪನಿ ಮುಖ್ಯಸ್ಥರು ತಮ್ಮ ಸಿಎಸ್‌ಆರ್‌ ನಿಧಿಯಲ್ಲಿ ಇದೇ ರೀತಿ ಕೆರೆಗಳನ್ನು ಅಭಿವೃದ್ಧಿ ಮಾಡಲು ಮುಂದಾದರು.

ADVERTISEMENT

ಕಬ್ಬಿಣ ಮತ್ತು ಸಿಮೆಂಟ್‌ ಅನ್ನು ಹೆಚ್ಚು ಬಳಸದೆ ನೈಸರ್ಗಿಕವಾಗಿ ಕಲ್ಮಶವನ್ನೂ ಬೇರ್ಪಡಿಸಿ ಬೆಂಗಳೂರಿನಲ್ಲಿ ಕೆರೆಗಳನ್ನು ಮೂರ್ನಾಲ್ಕು ತಿಂಗಳಲ್ಲಿ ಆನಂದ ಅಭಿವೃದ್ಧಿಪಡಿಸಿದ್ದಾರೆ. ಈ ಮಾಹಿತಿ ತಿಳಿದ ಅಯೋಧ್ಯೆಯ ಯಶ್‌ ಪಕ್ಕಾ ಪೇಪರ್‌ ಕಂಪನಿ ಮುಖ್ಯಸ್ಥರು ತಮ್ಮ ಸಿಎಸ್‌ಆರ್‌ ನಿಧಿಯಲ್ಲಿ ಉತ್ತರ ಪ್ರದೇಶದ ಸಿರ್‌ಸಿಂಡಾ ಗ್ರಾಮದಲ್ಲಿ ಇದೇ ರೀತಿ ಕೆರೆಗಳನ್ನು ಅಭಿವೃದ್ಧಿ ಮಾಡಲು ಬಯಸಿತು.

‘ಕಂಪನಿ ಪ್ರತಿ ಕೆರೆಗೆ ₹20 ಲಕ್ಷ ಎಂದು ಅಂದಾಜು ಮಾಡಿತ್ತು. ನಾನು ಪ್ರತಿ ಕೆರೆಗೆ ₹10 ಲಕ್ಷದ ಯೋಜನೆ ನೀಡಿದೆ. ಕಂಪನಿ ಉಪಾಧ್ಯಕ್ಷ ವೇದ್‌ ಕೃಷ್ಣ, ಕೆರೆಗಳ ಅಭಿವೃದ್ಧಿಗೆ ಕೂಡಲೇ ಸಮ್ಮತಿಸಿದರು. ಸಿರ್‌ಸಿಂಡಾ ಗ್ರಾಮದಲ್ಲಿ ತಲಾ ಒಂದು ಎಕರೆಯುಳ್ಳ ಆರು ಕೆರೆಗಳ ಅಭಿವೃದ್ಧಿ ಮೇ ಮೊದಲ ವಾರದಲ್ಲಿ ಆರಂಭಗೊಂಡು, ಜೂನ್‌ ಮೊದಲ ವಾರದಲ್ಲಿ ಮುಗಿದಿದೆ’ ಎಂದು ಹೇಳಿದ ಆನಂದ, ಅಯೋಧ್ಯೆಯಲ್ಲಿನ ತಮ್ಮ ಕೆಲಸವನ್ನು ವಿವರಿಸಿದರು.

ಸಿರ್‌ಸಿಂಡಾ ಕೆರೆಗಳ ಅಭಿವೃದ್ಧಿ ಕಾಮಗಾರಿ ಅಯೋಧ್ಯೆ ವಿಕಾಸ ಪ್ರಾಧಿಕಾರದ ಗಮನ ಸೆಳೆಯಿತು. ಪ್ರಾಧಿಕಾರದ ಉಪಾಧ್ಯಕ್ಷ ವಿಕಾಸ್‌ ಸಿಂಗ್‌ ಅವರು ಆನಂದ್‌ ಅವರನ್ನು ಭೇಟಿಯಾದರು. ಬೆಂಗಳೂರಿಗೆ ಬಂದ ಸಿಂಗ್‌, ಇಲ್ಲಿ ಅಭಿವೃದ್ಧಿ ಮಾಡಿರುವ ಕೆರೆಗಳನ್ನೂ ಕಂಡರು. ಆನಂದ್‌ ಕಾರ್ಯದಿಂದ ಸಂತಸಗೊಂಡು ಅವರನ್ನು ಅಯೋಧ್ಯೆ ವಿಕಾಸ ಪ್ರಾಧಿಕಾರದ ಸಲಹೆಗಾರರನ್ನಾಗಿ ಸೇರಿಸಿಕೊಂಡರು. ಆನಂದ ಅವರ ಸಲಹೆಯಂತೆ, ಅಯೋಧ್ಯೆಯಲ್ಲಿನ ಕೆರೆಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.

‘ಉತ್ತರ ಪ್ರದೇಶ ಸರ್ಕಾರ ರಾಜ್ಯದಾದ್ಯಂತ ಕೆರೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸುತ್ತಿದೆ. ಇದಕ್ಕೆ ನಮ್ಮ ಬೆಂಗಳೂರು ಮಾದರಿಯನ್ನೇ ಅಳವಡಿಸಿಕೊಳ್ಳಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಅದಕ್ಕಾಗಿ ಸಲಹೆಗಾರನನ್ನಾಗಿ ನನ್ನನ್ನು ನೇಮಿಸಿಕೊಂಡಿದ್ದಾರೆ. ಮೇಘಾಲಯ, ಒಡಿಶಾ ಹಾಗೂ ಮಹಾರಾಷ್ಟ್ರಗಳಲ್ಲೂ ಇದೇ ಮಾದರಿಯಲ್ಲಿ ಕೆರೆ ಅಭಿವೃದ್ಧಿಗೆ ಸಲಹೆಗಳನ್ನು ನೀಡುತ್ತಿದ್ದೇನೆ’ ಎಂದು ಆನಂದ್‌ ತಿಳಿಸಿದರು.

ಆಗಸ್ಟ್‌ 15ರೊಳಗೆ ಎಂಟು ಕುಂಡ್‌ ಸಿದ್ಧ: ಆನಂದ

‘ರಾಮಮಂದಿರದ 5 ಕಿ.ಮೀ ವ್ಯಾಪ್ತಿಯಲ್ಲಿರುವ ವಿದ್ಯಾ ಕುಂಡ್‌, ಕುರ್ಜ್ವಾ ಕುಂಡ್‌, ಸೀತಾ ಕುಂಡ್‌, ಬ್ರಹ್ಮ
ಕುಂಡ್‌, ಅಗ್ನಿ ಕುಂಡ್‌, ಸೂರ್ಯ ಕುಂಡ್‌, ಮನುಮುನಿ ಕುಂಡ್‌ ದಶರಥ್‌ ಕುಂಡ್‌ಗಳನ್ನು ತಲಾ ₹1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಅಯೋಧ್ಯೆ ವಿಕಾಸ್‌ ಪ್ರಾಧಿಕಾರ ವತಿಯಿಂದ ನಡೆಸಲಾಗುತ್ತಿದೆ.
ಮೇ 2ನೇ ವಾರದಲ್ಲಿ ಕಾಮಗಾರಿ ಆರಂಭವಾಗಿದ್ದು, ಆಗಸ್ಟ್‌ 15ರೊಳಗೆ ಮುಗಿಯಲಿದೆ’ ಎಂದು ಆನಂದ ತಿಳಿಸಿದರು.

46 ಕಿ.ಮೀ ನದಿ: ‘ಅಯೋಧ್ಯೆಯಲ್ಲಿ ಸಾಕಷ್ಟು ಕೊಳಚೆಯನ್ನು ಶೇಖರಿಸಿಕೊಂಡಿದ್ದ 11 ಎಕರೆ ಪ್ರದೇಶದ ಲಾಲ್‌ ಡಿಗ್ಗಿ ಕೆರೆ ಕಾಮಗಾರಿಗೂ ತಾಂತ್ರಿಕ ಸಲಹೆ ನೀಡುತ್ತಿದ್ದೇನೆ. ಹರಿವನ್ನು ಕಳೆದುಕೊಳ್ಳುತ್ತಿದ್ದ 46 ಕಿ.ಮೀ ಉದ್ದದ ತಿಲೋದ್‌ ಕಿ ಗಂಗಾ ನದಿ ಪುನಶ್ಚೇತನ ಕಾಮಗಾರಿ ಎರಡು ಹಂತದಲ್ಲಿ ಸುಮಾರು 7 ಕಿ.ಮೀ ಮುಗಿದಿದೆ. ಮೂರನೇ ಹಂತದ 23 ಕಿ.ಮೀ ಕಾಮಗಾರಿ ನಡೆಯುತ್ತಿದೆ. ಲಾಲ್‌ ಡಿಗ್ಗಿ ಕೆರೆಯ ಅಭಿವೃದ್ಧಿ ಇನ್ನು 15 ದಿನದಲ್ಲಿ ಮುಗಿಯಲಿದೆ’ ಎಂದರು.

ಅಯೋಧ್ಯೆಯಿಂದ 25 ಕಿ.ಮೀ ದೂರವಿರುವ 165 ಎಕರೆ ಪ್ರದೇಶದ ಸಮದಾ ಕೆರೆಯನ್ನು ಅಂತರರಾಷ್ಟ್ರೀಯ ಪಕ್ಷಿಧಾಮವನ್ನಾಗಿ ರೂಪಿಸಲಾಗುತ್ತಿದೆ. ಇದಕ್ಕೆ ಪ್ರಾಧಿಕಾರ ₹8 ಕೋಟಿಯ ಯೋಜನೆ ರೂಪಿಸಿತ್ತು. ಅದನ್ನು ₹4.5 ಕೋಟಿಗೆ ಇಳಿಸಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಆನಂದ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.