ADVERTISEMENT

ಬಿಜೆಪಿ ನಕಲಿ ಪಟ್ಟಿ: ನಾಯಕರ ಗಾಬರಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2023, 6:57 IST
Last Updated 5 ಏಪ್ರಿಲ್ 2023, 6:57 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯೊಂದು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಂಚಲನ ಸೃಷ್ಟಿಸಿದ್ದರಿಂದ, ಪಕ್ಷದ ನಾಯಕರು, ಟಿಕೆಟ್‌ ಆಕಾಂಕ್ಷಿಗಳು ಕೆಲಹೊತ್ತು ಗಾಬರಿಗೊಳಗಾದರು.

‘ಪಕ್ಷ ಯಾವುದೇ ಪಟ್ಟಿಯನ್ನೂ ಬಿಡುಗಡೆ ಮಾಡಿಲ್ಲ, ಸಾಮಾಜಿಕ ಜಾಲತಾಣದಲ್ಲಿರುವ ಪಟ್ಟಿ ನಕಲಿ’ ಎಂದು ಬಿಜೆಪಿ ಸ್ಪಷ್ಟಪಡಿಸಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಕೇಂದ್ರ ಕಚೇರಿ, ನವದೆಹಲಿ ಲೆಟರ್‌ ಹೆಡ್‌ ಮಾದರಿಯಲ್ಲೇ ಸೃಷ್ಟಿಸಲಾಗಿದೆ. ಸಾಮಾನ್ಯವಾಗಿ ದೆಹಲಿಯಿಂದ ಬಿಜೆಪಿ ಪಟ್ಟಿ ಪ್ರಕಟಣೆ ಬಿಡುಗಡೆ ಮಾಡುವಾಗ ಹಿಂದಿ, ಇಂಗ್ಲಿಷ್‌ ಭಾಷೆಗಳನ್ನು ಬಳಸುತ್ತದೆ. ಆದರೆ, ಈ ಪಟ್ಟಿಯಲ್ಲಿ ಕೇವಲ ಇಂಗ್ಲಿಷ್‌ ಭಾಷೆ ಮಾತ್ರ ಇತ್ತು. ಪಕ್ಷದ ಸೀಲ್‌ ಕೂಡ ಬಳಸಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್ ಅವರ ಸಹಿಯನ್ನೂ ನಕಲಿ ಮಾಡಲಾಗಿದೆ.

ADVERTISEMENT

ಇದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ದಾವಣಗೆರೆ ದಕ್ಷಿಣ ಕ್ಷೇತ್ರ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿಗೆ ಹುಬ್ಬಳ್ಳಿ–ಧಾರವಾಡ ಕೇಂದ್ರ, ಭಗವಂತ ಖೂಬಾಗೆ ಬಸವ ಕಲ್ಯಾಣ, ಸಂಸದರಾದ ಅಣ್ಣಾ ಸಾಹೇಬ್‌ ಜೊಲ್ಲೆಗೆ ನಿಪ್ಪಾಣಿ, ನಳಿನ್‌ ಕುಮಾರ್‌ ಕಟೀಲ್‌ಗೆ ಮಂಗಳೂರು ಉತ್ತರ, ಸುಮಲತಾ ಅಂಬರೀಷ್‌ಗೆ ಮಂಡ್ಯ ಕ್ಷೇತ್ರದ ಟಿಕೆಟ್ ನೀಡಲಾಗುತ್ತದೆ ಎಂದಿದೆ.

ಸಚಿವರಾದ ಸಿ.ಎನ್‌. ಅಶ್ವತ್ಥನಾರಾಯಣಗೆ ರಾಮನಗರ, ಆರ್. ಅಶೋಕಗೆ ಬ್ಯಾಟರಾಯನಪುರ, ವಿ.ಸುನಿಲ್ ಕುಮಾರ್‌ಗೆ ಉಡುಪಿ, ಮುನಿರತ್ನಗೆ ಗಾಂಧಿನಗರ ಟಿಕೆಟ್ ನೀಡಲಾಗುತ್ತದೆ ಎಂದೂ ಉಲ್ಲೇಖಿಸಲಾಗಿತ್ತು.

ಶಿವಮೊಗ್ಗದಲ್ಲಿ ಈಶ್ವರಪ್ಪ ಅವರ ಪುತ್ರ ಕಾಂತೇಶ್‌, ಸೊರಬಕ್ಕೆ ಕುಡುಚಿ ಶಾಸಕ ಪಿ.ರಾಜೀವ್‌, ಕಾರ್ಕಳಕ್ಕೆ ಪ್ರಮೋದ್‌ ಮುತಾಲಿಕ್‌, ಆರ್‌.ಆರ್‌.ನಗರಕ್ಕೆ ಮುನಿರಾಜುಗೌಡ, ಚಾಮರಾಜಪೇಟೆಗೆ ಸೈಲೆಂಟ್‌ ಸುನಿಲ್‌, ಅರಸೀಕೆರೆಗೆ ಅರುಣ್‌ ಸೋಮಣ್ಣ ಅವರ ಹೆಸರನ್ನು ತೋರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.