ಬೆಂಗಳೂರು: ‘ಆರ್.ಆರ್. ನಗರ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಸೋಲುವ ಭಯದಿಂದ ಬಿಜೆಪಿಯವರು ಗಲಾಟೆ, ದೊಂಬಿ ಮಾಡಿಸುತ್ತಿದ್ದಾರೆ. ಮಧ್ಯಾಹ್ನದವರೆಗೆ ಶಾಂತಿಯುತವಾಗಿ ಮತದಾನ ನಡೆದಿದೆ. ಆದರೆ, ನಂತರ ಮತದಾರರು ಮತದಾನಕ್ಕೆ ಬರದಂತೆ ತಡೆಯೊಡ್ಡುತ್ತಿದ್ದಾರೆ. ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೂ ತಂದಿದ್ದೇವೆ. ಹೆಚ್ಚಿನ ಪೊಲೀಸರ ಭದ್ರತೆ ನೀಡುವಂತೆ ಮನವಿ ಮಾಡಿದ್ದೇವೆ’ ಎಂದು ವಿಧಾನಪರಿಷತ್ ಸದಸ್ಯ ಕಾಂಗ್ರೆಸ್ ನಾರಾಯಣಸ್ವಾಮಿ ಹೇಳಿದರು.
‘ಜನರು ಆತಂಕ ಪಡುವ ಅವಶ್ಯಕತೆ ಇಲ್ಲ, ಧೈರ್ಯವಾಗಿ ಬಂದು ಮತದಾನ ಮಾಡಬೇಕು’ ಎಂದೂ ಅವರು ಮನವಿ ಮಾಡಿದ್ದಾರೆ.
ಆರ್.ಆರ್. ನಗರ ಕ್ಷೇತ್ರದಲ್ಲಿ ಸಂಜೆ 5 ಗಂಟೆವರೆಗೆ ಕೇವಲ ಶೇ 39.15ರಷ್ಟು ಮತದಾನ ನಡೆದಿದೆ.
ಬಿಜೆಪಿಯಿಂದ ಹಣ ಹಂಚಿಕೆ–ಆರೋಪ: ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ತಂದೆ ಹನುಮಂತರಾಯಪ್ಪ, ‘ಕೊಟ್ಟಿಗೆಪಾಳ್ಯ ವಾರ್ಡ್ನ ಮಾಲಗಾಳದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಜಿ. ಮೋಹನ್ ಕುಮಾರ್ ಬಾಮೈದ ಮತ್ತು ಅವರ ಸೋದರ ಮುಕ್ತವಾಗಿ ಹಣ ಹಂಚುತ್ತಿದ್ದಾರೆ. ಒಂದು ಮತಕ್ಕೆ ₹2 ಸಾವಿರ ಹಂಚುತ್ತಿದ್ದಾರೆ’ ಎಂದಿದ್ದಾರೆ.
‘ಈಗಾಗಲೇ ನಾನು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದೇನೆ. ಇಂತಹ ಅಕ್ರಮಗಳನ್ನು ಮಾಡಿ ಚುನಾವಣೆ ಗೆಲ್ಲಬಹುದು ಅಂದುಕೊಂಡಿದ್ದಾರೆ. ಮತದಾರರು ಈಗಾಗಲೇ ಅವರನ್ನು ತಿರಸ್ಕರಿಸಲು ನಿರ್ಧರಿಸಿದ್ದಾರೆ. ಹಣದಿಂದ ಎಲ್ಲವನ್ನೂ ಕೊಂಡುಕೊಳ್ಳಬಹುದು ಎನ್ನುವುದು ದಾಷ್ಟ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಿಜೆಪಿ ಅಭ್ಯರ್ಥಿ ಇವತ್ತು ನೀಚ ಕೃತ್ಯಕ್ಕೆ ಕೈ ಹಾಕಿದ್ದಾರೆ. ನಿಜವಾಗಿಯೂ ಅದು ನೆರವೇರುವುದಿಲ್ಲ. ಬೆಳಿಗ್ಗೆಯಿಂದ ಸುಮಾರು ಶೇ 80ರಷ್ಟು ಮತಗಟ್ಟೆಗಳಿಗೆ ಭೇಟಿ ಕೊಟ್ಟಿದ್ದೇನೆ. ಮತದಾರರು ಸಂತೋಷದಿಂದ ಮತದಾನ ಮಾಡಲು ಬರುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ತನ್ನ ಸೋಲಿನ ಭಯದಿಂದ ಹಲವು ಕಡೆ ಅಕ್ರಮಗಳಲ್ಲಿ ತೊಡಗಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಕರೆ ಮಾಡಿ ನನಗೆ ಮಾಹಿತಿ ನೀಡಿದ್ದಾರೆ’ ಎಂದರು.
ಮತಗಟ್ಟೆಗಳಿಗೆ ಭೇಟಿ: ಯಶವಂತಪುರ, ಜಾಲಹಳ್ಳಿಯ ವಿವಿಧ ಮತಗಟ್ಟೆಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಭೇಟಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.