ADVERTISEMENT

ಪುನರ್ವಸತಿ ಅವಶ್ಯಕತೆ ಇದೆ: ಹೈಕೋರ್ಟ್ ಅಭಿಪ್ರಾಯ

ಬಾಂಗ್ಲಾ ದೇಶದವರು ನೆಲೆಸಿದ್ದಾರೆ ಎಂಬ ನೆಪ: ಮಾರತ್ತಹಳ್ಳಿ–ಜೋಪಡಿಗಳ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 19:36 IST
Last Updated 3 ಫೆಬ್ರುವರಿ 2020, 19:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಬಾಂಗ್ಲಾ ದೇಶದವರು ಅಕ್ರಮವಾಗಿ ನೆಲೆಸಿದ್ದಾರೆ ಎಂಬ ನೆಪದಲ್ಲಿ ಮಹದೇವಪುರ ವಲಯದ ತೂಬರಹಳ್ಳಿ ಹಾಗೂ ಕುಂದಲಹಳ್ಳಿ ವ್ಯಾಪ್ತಿಯಲ್ಲಿ ತೆರವುಗೊಂಡ ವಲಸೆ ಕಾರ್ಮಿಕರಿಗೆ ಅದೇ ಜಾಗದಲ್ಲಿ ಅಥವಾ ಸರ್ಕಾರಿ ಜಾಗದಲ್ಲಿ ಪುನರ್ವಸತಿ ಕಲ್ಪಿಸುವ, ಇಲ್ಲವೇ ಪರಿಹಾರ ನೀಡುವ ಅವಶ್ಯಕತೆ ಇದೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

‘ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸಲಾಗಿದೆ’ ಎಂದು ಆಕ್ಷೇಪಿಸಿ, ಪೀಪಲ್ಸ್‌ ಯೂನಿಯನ್‌ ಫಾರ್ ಸಿವಿಲ್‌ ಲಿಬರ್ಟೀಸ್ (ಪಿಯುಸಿಎಲ್‌)– ಕರ್ನಾಟಕ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾ
ರಣೆ ನಡೆಸಿ, ‘ಈ ಕುರಿತಂತೆ ನಿಮ್ಮ ನಿಲುವು ಏನೆಂಬುದನ್ನು ತಿಳಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಇದೇ 10ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ‘ಅಕ್ರಮವಾಗಿ ಬಾಂಗ್ಲಾ ವಲಸಿಗರ ಇರುವಿಕೆಯನ್ನು ಗುರುತಿಸುವ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಕಳೆದ ವರ್ಷ ಸುತ್ತೋಲೆ ಹೊರಡಿಸಿದೆ.

ADVERTISEMENT

ಈ ಸುತ್ತೋಲೆಯ ಆಧಾರದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಕಳೆದ ತಿಂಗಳ 18ರಂದು ಮಾರತ್‌ಹಳ್ಳಿ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ಗೆ ಒಂದು ಪತ್ರ ಬರೆದಿದ್ದರು. ಮಂತ್ರಿ ಅಪಾರ್ಟ್‌ಮೆಂಟ್‌ ಹಿಂಭಾಗದಲ್ಲಿ ಅಕ್ರಮವಾಗಿ ನೆಲೆಸಿರುವ ಜನರಿಂದ ಸ್ಥಳೀಯರಿಗೆ ತೊಂದರೆ ಆಗುತ್ತಿದೆ ಎಂದು ತಿಳಿಸಿದ್ದರು. ಈ ಪತ್ರದ ಆಧಾರದಲ್ಲಿ ಜೋಪಡಿಗಳಲ್ಲಿ ನೆಲೆಸಿದವರನ್ನು ಸವಿನಯಪೂರ್ವಕ ನಡವಳಿಕೆಯಿಂದಲೇ ತೆರವುಗೊಳಿಸಲಾಗಿದೆ’ ಎಂದು ವಿವರಿಸಿದರು.

ಇದಕ್ಕೆ ಕೆರಳಿದ ನ್ಯಾಯಪೀಠ, ‘ತೆರವುಗೊಳಿಸುವ ಮುನ್ನ ಅವರನ್ನು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಗುರುತಿಸಿದವರು ಯಾರು? ಆ ಸಕ್ಷಮ ಪ್ರಾಧಿಕಾರ ಎಲ್ಲಿದೆ? ಯಾವ ಪೊಲೀಸ್‌ ಅಧಿಕಾರಿ ಅವರ ವಿಚಾರಣೆ
ನಡೆಸಿದರು? ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಎಷ್ಟೋ ಶ್ರೀಮಂತರ ಕಟ್ಟಡಗಳಿವೆ. ಅವುಗಳನ್ನೂ ಇದೇ ರೀತಿ ತೆರವುಗೊಳಿಸುತ್ತೀರಾ? ತೆರವು ಕಾರ್ಯಾಚರಣೆ ನಡೆಸಿದ ಅಧಿಕಾರಿಯನ್ನು ಮನೆಗೆ ಕಳುಹಿಸುವುದನ್ನು ಬಿಟ್ಟು ಅವರನ್ನು ಅಲ್ಲಿಂದ ವರ್ಗಾವಣೆ ಮಾಡಿದ್ದೇವೆ ಎಂದು ಹೇಳುತ್ತಿದ್ದೀರಲ್ಲಾ, ಇದನ್ನೆಲ್ಲಾ ನೋಡಿ ನಾವು ಕೈಕಟ್ಟಿ ಕುಳಿತುಕೊಳ್ಳಲು ಆಗುವುದಿಲ್ಲ’ ಎಂದು ಕಿಡಿಕಾರಿತು.

‘ನೀವು ನ್ಯಾಯೋಚಿತ ವಿಧಾನದಲ್ಲಿ ನಡೆದುಕೊಂಡಿಲ್ಲ. ನಿಮ್ಮ ಈ ಕಾರ್ಯಾಚರಣೆ ಬಹಳ ಅಪಾಯಕಾರಿಯಾಗಿ ಕಂಡುಬರುತ್ತಿದೆ. ಈ ವಿಷಯದಲ್ಲಿ ಪೊಲಿಸರು ಹಾಗೂ ಬಿಬಿಎಂಪಿ ತಮ್ಮ ಮೇಲಿನ ಹೊಣೆಗಾರಿಕೆಯನ್ನು ಪರಸ್ಪರ ವರ್ಗಾಯಿಸುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ, ರಾಜ್ಯ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ಎಂದು ಅನ್ನಿಸುತ್ತಿಲ್ಲ. ಇದು ಪೊಲೀಸರಿಂದಲೇ ಆರಂಭವಾಗಿರುವ ಕೃತ್ಯ. ಇದಕ್ಕೆ ಅವರಿಂದಲೇ ಅಂತ್ಯ ಕಾಣಿಸಬೇಕು’ ಎಂದು ಹೇಳಿತು.

***

ಜೋಪಡಿಗಳ ತೆರವಿನಿಂದ ನಿರ್ವಸಿತರಾಗಿರುವ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದೇವೆ. 60 ಕುಟುಂಬಗಳು ಬೇರೆ ಕಟ್ಟಡಗಳಿಗೆ ಹೋಗಲು ನಿರಾಕರಿಸಿವೆ

– ಬಿ.ಎಚ್‌.ಅನಿಲ್‌ ಕುಮಾರ್‌, ಬಿಬಿಎಂ‍ಪಿ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.