ADVERTISEMENT

ಸಿದ್ದರಾಮಯ್ಯ ಕ್ಷಮೆ ಕೋರಲಿ: ಟಿ.ಬಿ. ಬಳಗಾವಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 21:31 IST
Last Updated 2 ಸೆಪ್ಟೆಂಬರ್ 2022, 21:31 IST

ಬೆಂಗಳೂರು: ‘ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕ ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣ ಅವರು ವಿ.ಸೋಮಣ್ಣ ವಿರುದ್ಧ ಮಾಡಿರುವ ಆರೋಪಗಳು ನಿರಾಧಾರವಾದವು. ಕೂಡಲೇ ಅವರು ಕ್ಷಮೆಯಾಚಿಸಬೇಕು’ ಎಂದು ಕರ್ನಾಟಕ ಪ್ರದೇಶ ಕುರಬರ ಸಂಘದ ನಿರ್ದೇಶಕ ಟಿ.ಬಿ. ಬಳಗಾವಿ ಒತ್ತಾಯಿಸಿದರು.

‘ಗೋವಿಂದರಾಜನಗರ ಮತ್ತು ವಿಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕ ಕೃಷ್ಣಪ್ಪ ಮತ್ತು ಮಾಜಿ ಶಾಸಕ ಪ್ರಿಯಾಕೃಷ್ಣ ಅವರ ಸಾಧನೆ ಶೂನ್ಯ. ಸಚಿವ ವಿ.ಸೋಮಣ್ಣ ವಿರುದ್ಧ ಅನಗತ್ಯ ಆರೋಪ ಮಾಡುತ್ತಿರುವುದು ಖಂಡನೀಯ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಿಯಾಕೃಷ್ಣ 9.5 ಹಾಗೂ ಕೃಷ್ಣಪ್ಪ 15 ವರ್ಷ ಶಾಸಕರಾಗಿ ಕಾರ್ಯನಿರ್ವಹಿಸಿದ್ದು, ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿಲ್ಲ. ವಿ.ಸೋಮಣ್ಣ ನಿರ್ಮಿಸಿರುವ ರಸ್ತೆ, ಉದ್ಯಾನಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಅಪ್ಪ–ಮಗನಿಗೆ ಸಾಧ್ಯವಾಗುತ್ತಿಲ್ಲ. ಕೃಷ್ಣಪ್ಪ ಅವರು ತಾವರೆಕೆರೆ ಬಳಿ ಸೊಸೈಟಿ ಮೂಲಕ ನಿವೇಶನ ಕೊಡಿಸುವುದಾಗಿ ಹೇಳಿ, ಜನರಿಂದ ಹಣ ಪಡೆದು ವಂಚಿಸಿದ್ದಾರೆ. ಇಂತಹ ವಂಚಕರನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘2017ರಲ್ಲಿ ರಾಜೀವಗಾಂಧಿ ವಸತಿ ಯೋಜನೆ ಅಡಿಯಲ್ಲಿ 1 ಲಕ್ಷ ಬಹುಮಹಡಿ ವಸತಿ ನಿರ್ಮಿಸುವುದಾಗಿ ಅಂದಿನ ಸರ್ಕಾರ ಘೋಷಣೆ ಮಾಡಿತ್ತು. ಎಚ್.ಡಿ. ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರದಲ್ಲಿ ₹4,475 ಕೋಟಿ ವೆಚ್ಚದಲ್ಲಿ 46,499 ಮನೆಗಳನ್ನು ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಿತ್ತು. 28,754 ಮನೆಗಳಿಗೆ 2019ರ ಮಾರ್ಚ್‌ನಲ್ಲಿ ₹3,035 ಕೋಟಿ ವೆಚ್ಚದಲ್ಲಿ ಎಲ್‌ಒಸಿ ನೀಡಿ, 2019ರ ಜೂನ್‌ನಲ್ಲಿ ಗುತ್ತಿಗೆದಾರರೊಂದಿಗೆ ಕರಾರು ಮಾಡಿಕೊಂಡಿದ್ದರು. ವಿವಾದರಹಿತ ಜಮೀನನ್ನು ಗುತ್ತಿಗೆದಾರರರಿಗೆ ಹಸ್ತಾಂತರ ಮಾಡದ ಕಾರಣ ಮೂರು ವರ್ಷವಾದರೂ ಕಾಮಗಾರಿ ಪ್ರಾರಂಭವಾಗಿರಲಿಲ್ಲ. ವಿ.ಸೋಮಣ್ಣ ಸಚಿವರಾದ ಮೇಲೆ 1,040
ಎಕರೆ ಜಮೀನನ್ನು ನಿಗಮದ ವಶಕ್ಕೆ ಪಡೆದು, ಈ ಪೈಕಿ 553 ಎಕರೆ ಜಮೀನಿನಲ್ಲಿ 48,498 ಮನೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಸದ್ಯ 2000 ಮನೆಗಳು ನಿರ್ಮಾಣವಾಗಿದ್ದು, 10,000 ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ’ ಎಂದು ಬಿಬಿಎಂಪಿ ಮಾಜಿ ಸದಸ್ಯ ಡಾ.ರಾಜು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.