ಬೆಂಗಳೂರು: ನಗರದಲ್ಲಿ ಸಂಚಾರ ಸಮಸ್ಯೆ ನೀಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮವು (ಕೆಆರ್ಡಿಸಿಎಲ್) ತೀವ್ರ ದಟ್ಟಣೆ ಇರುವ 12 ಕಾರಿಡಾರ್ಗಳ ಉನ್ನತೀಕರಣ ಹಾಗೂ ನಿರ್ವಹಣೆಯ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ಕುರಿತು ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿದೆ.
‘12 ಕಾರಿಡಾರ್ಗಳ ಪ್ರಾರಂಭಿಕ ಹಂತದ ಅಭಿವೃದ್ಧಿಗೆ ₹ 335.17 ಕೋಟಿ ಅಗತ್ಯವಿದೆ. ವಾರ್ಷಿಕ ನಿರ್ವಹಣಾ ವೆಚ್ಚ
₹142.12 ಕೋಟಿಗಳಾಗುತ್ತವೆ. ಉನ್ನತೀಕರಣ ಮತ್ತು ಒಂದು ವಾರ್ಷಿಕ ನಿರ್ವಹಣಾ ಕಾರ್ಯಕ್ಕೆ ಒಟ್ಟು ₹ 477.29 ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಈ ಪ್ರಕಾರ ಅಧಿಕ ವಾಹನದಟ್ಟಣೆ ಇರುವ ಕಾರಿಡಾರ್ಗಳ ಅಭಿವೃದ್ಧಿ ಮತ್ತು ನಿರ್ವಹಣೆ ಕೈಗೆತ್ತಿಕೊಳ್ಳಲು ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಪ್ರಾರಂಭಿಕ ಹಂತದ ಅಭಿವೃದ್ಧಿ ಹಾಗೂ 5 ವರ್ಷಗಳವರೆಗೆ ನಿರ್ವಹಣೆ ಮಾಡಲು ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ (ಮೈಸೂರಿ ರಸ್ತೆಯಿಂದ), ಪಶ್ಚಿಮ ಕಾರ್ಡ್ ರಸ್ತೆ, ತುಮಕೂರು ರಸ್ತೆಯಿಂದ ಕೆ.ಆರ್.ಪುರ, ಕೆ.ಆರ್. ಪುರದಿಂದ ಸಿಲ್ಕ್ ಬೋರ್ಡ್ ಸಂಪರ್ಕಿಸುವ ರಸ್ತೆಗಳನ್ನು ಗುರುತಿಸಲಾಗಿದೆ. ಹೊರವಲಯದ ರಸ್ತೆ ಸಂಪರ್ಕ ಜಾಲವನ್ನು ವಿಸ್ತರಿಸುವುದರಿಂದ ವಾಹನಗಳು ನಗರದೊಳಗೆ ಅನಗತ್ಯವಾಗಿ ಹಾದುಹೋಗುವುದು ತಪ್ಪಲಿದೆ ಎಂದು ನಿಗಮ ಹೇಳಿದೆ.
ಈ ಕಾರಿಡಾರ್ಗಳನ್ನು ಇದುವರೆಗೆ ಬಿಬಿಎಂಪಿಯೇ ನಿರ್ವಹಣೆ ಮಾಡುತ್ತಿತ್ತು. ಬಿಬಿಎಂಪಿಯಲ್ಲಿ ಇದಕ್ಕಾಗಿ ಅಗತ್ಯ ಸೌಕರ್ಯ ಇಲ್ಲ ಎಂಬ ಕಾರಣಕ್ಕೆ ಸರ್ಕಾರ ಇವುಗಳ ನಿರ್ವಹಣೆಯನ್ನು ಕೆಆರ್ಡಿಸಿಎಲ್ಗೆ ವಹಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.