ಬೆಂಗಳೂರು: ನಂದಿನ ಹಾಲಿನ ದರ ₹5ಕ್ಕೆ ಹೆಚ್ಚಿಸುವ ಕರ್ನಾಟಕ ಹಾಲು ಮಹಾಮಂಡಳದ ಪ್ರಸ್ತಾವಕ್ಕೆ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಹಾಲು ಮಹಾಮಂಡಳಕ್ಕೆ (ಕೆಎಂಎಫ್) ಪತ್ರ ಬರೆದಿರುವ ಅವರು, ‘ಪ್ರತಿ ಲೀಟರ್ ನಂದಿನ ಹಾಲಿನ ದರ ಹೆಚ್ಚಳ ಮಾಡಿದರೆ, ಅದು ಹೋಟೆಲ್ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಆದ್ದರಿಂದ ಹಾಲಿನ ದರ ಏರಿಕೆಯ ಪ್ರಸ್ತಾವವನ್ನು ಕೈಬಿಡಬೇಕು’ ಎಂದು ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಒತ್ತಾಯಿಸಿದ್ದಾರೆ.
‘ಈಗಾಗಲೇ ಕಾಫಿಪುಡಿ ದರ ಹೆಚ್ಚಳವಾಗಿದೆ. ಈಗ ಹಾಲಿನ ದರ ಹೆಚ್ಚಿಸಿದರೆ ಚಹಾ, ಕಾಫಿಯ ಬೆಲೆ ಏರಿಕೆ ಮಾಡುವುದು ಹೋಟೆಲ್ಗಳ ಮಾಲೀಕರಿಗೆ ಅನಿವಾರ್ಯವಾಗಲಿದೆ. ಹೋಟೆಲ್ ಉದ್ಯಮ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಜೀವನಾಧಾರವಾಗಿದೆ. ಸರ್ಕಾರ ಹಾಗೂ ಸ್ಥಳೀಯ ಸಂಘ–ಸಂಸ್ಥೆಗಳಿಗೆ ದೊಡ್ಡಮಟ್ಟ ತೆರಿಗೆ ಮೂಲವಾಗಿದೆ’ ಎಂದು ತಿಳಿಸಿದ್ದಾರೆ.
‘ಹೋಟೆಲ್ಗಳಲ್ಲಿ ಗ್ರಾಹಕರಿಗೆ ಆಹಾರ ಸುರಕ್ಷತಾ ನೀತಿಗೆ ಅನುಗುಣವಾಗಿ ಶುಚಿತ್ವ ಹಾಗೂ ಗುಣಮಟ್ಟದ ನೀತಿಗಳನ್ನು ಅನುಸರಿಸುತ್ತಾ ಚಹಾ, ಕಾಫಿ, ಇತರೆ ಪಾನೀಯಗಳು ಸೇರಿದಂತೆ ತಿಂಡಿಯನ್ನು ಒದಗಿಸುತ್ತವೆ. ಒಂದೊಮ್ಮೆ ಹಾಲಿನ ದರ ಹೆಚ್ಚಳಗೊಂಡರೆ, ಇವುಗಳ ಬೆಲೆ ಏರಿಕೆ ಅನಿವಾರ್ಯವಾಗಲಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.