ADVERTISEMENT

ಕೆಎಟಿ ಖಾಲಿ ಹುದ್ದೆ: ಹೈಕೋರ್ಟ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 20:02 IST
Last Updated 3 ಜೂನ್ 2019, 20:02 IST
   

ಬೆಂಗಳೂರು: ‘ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ (ಕೆಎಟಿ) ಖಾಲಿ ಇರುವ ನ್ಯಾಯಾಂಗ ಮತ್ತು ಆಡಳಿತ ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡುವ ದಿಸೆಯಲ್ಲಿ ಇದೇ 11ರೊಳಗೆ ಸೂಕ್ತ ಕ್ರಮ ಕೈಗೊಂಡು ನ್ಯಾಯಾಲಯಕ್ಕೆ ತಿಳಿಸಬೇಕು. ಇಲ್ಲವಾದಲ್ಲಿ, ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಕಾರ್ಯದರ್ಶಿಯ ಖುದ್ದು ಹಾಜರಿಗೆ ಆದೇಶಿಸಬೇಕಾಗುತ್ತದೆ’ ಎಂದು ಹೈಕೋರ್ಟ್‌, ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದೆ.

ಈ ಕುರಿತಂತೆ ವಕೀಲರಾದ ಕೆ.ಸತೀಶ್‌ ಭಟ್, ಎಂ.ಲೋಕೇಶ್‌ ಮತ್ತು ಎಂ.ಕೆ.ಪೃಥ್ವೀಶ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಎಲ್.ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಂ.ಎಸ್.ಭಾಗವತ್‌, ‘ಕೆಎಟಿಯು ಬೆಂಗಳೂರು, ಬೆಳಗಾವಿ ಮತ್ತು ಕಲಬುರ್ಗಿಯಲ್ಲಿ ಒಟ್ಟು ಮೂರು ಪೀಠಗಳನ್ನು ಹೊಂದಿದೆ. ಸದ್ಯ ಅಧ್ಯಕ್ಷರು ಮತ್ತು ಒಬ್ಬ ಆಡಳಿತ ಸದಸ್ಯರು ಮಾತ್ರವೇ ಕಾರ್ಯ ನಿರ್ವಹಿಸುವಂತಾಗಿದೆ’ ಎಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲರು, ‘ರಾಜ್ಯ ಸರ್ಕಾರ 2018ರ ಸೆಪ್ಟೆಂಬರ್‌ನಲ್ಲೇ ಮೂವರು ನ್ಯಾಯಾಂಗ ಸದಸ್ಯರ ಹೆಸರನ್ನು ಶಿಫಾರಸು ಮಾಡಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ಆದರೆ, ಈ ಸಂಬಂಧ ಕ್ರಮ ಕೈಗೊಂಡ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಲುಪಿಲ್ಲ. ಆದ್ದರಿಂದ, ಹೆಚ್ಚಿನ ವಿವರ ಪಡೆಯಲು ಕಾಲಾವಕಾಶ ಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಇದೇ 11ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.