ಬೆಂಗಳೂರು: ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿ ವರ್ಷವಾಗುತ್ತಿದ್ದರೂ ನಗರದ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯಲ್ಲಿರುವ ಹತ್ತಕ್ಕೂ ಹೆಚ್ಚು ಮನೆಗಳಿಗೆ ಕಾವೇರಿ ನೀರಿನ ಸಂಪರ್ಕ ನೀಡುತ್ತಿಲ್ಲ.
ಗೊಟ್ಟಿಗೆರೆ ಡಿ–ಮಾರ್ಟ್ ಹಿಂಭಾಗದಲ್ಲಿರುವ ಇಲ್ಲಿನ ನಿವಾಸಿಗಳು ವರ್ಷದ ಹಿಂದೆ ಹೊಸ ನೀರಿನ ಸಂಪರ್ಕಕ್ಕಾಗಿ ಜಲಮಂಡಳಿಗೆ ಅರ್ಜಿ ಸಲ್ಲಿಸಿ, ಶುಲ್ಕವನ್ನೂ ಪಾವತಿಸಿದ್ದಾರೆ. ಕಾವೇರಿ ನೀರು ಪೂರೈಕೆಗಾಗಿ ಮನೆಗಳವರೆಗೆ ಕೊಳವೆಗಳನ್ನೂ ಅಳವಡಿಸಿದ್ದಾರೆ. ಹೊಸ ಮೀಟರ್ಗಳನ್ನು ತಂದು ಮನೆಗಳ ಸಮೀಪ ಜೋಡಿಸಿಟ್ಟಿದ್ದಾರೆ. ಆದರೆ, ಮನೆಗಳಿಗೆ ನೀರು ಸರಬರಾಜು ಮಾಡುತ್ತಿಲ್ಲ.
‘ಗೊಟ್ಟಿಗೆರೆಯಲ್ಲಿರುವ ನಮ್ಮ ಭಾಗದಲ್ಲಿ ಎಂಟರಿಂದ ಹತ್ತು ಮನೆಗಳಿಗಷ್ಟೇ ಕಾವೇರಿ ನೀರು ಬರುತ್ತಿಲ್ಲ. ಪಕ್ಕದ ರಸ್ತೆಯಲ್ಲಿರುವ ಎಲ್ಲ ಮನೆಗಳಿಗೂ ನೀರು ಬರುತ್ತದೆ. ಈ ಕುರಿತು ಜಲಮಂಡಳಿ ಎಂಜಿನಿಯರ್ಗಳಿಗೆ ದೂರು ಕೊಟ್ಟಿದ್ದೇವೆ. ದೂರು ಪುಸ್ತಕದಲ್ಲೂ ನಮೂದಿಸಿದ್ದೇವೆ. ಆದರೆ ಯಾವುದೇ ಕ್ರಮವಾಗಿಲ್ಲ’ ಎಂದು ಇಲ್ಲಿನ ನಿವಾಸಿ ಮಧು ಅಳಲು ತೋಡಿಕೊಂಡರು.
‘ಮೊದಲಿನಿಂದಲೂ ಟ್ಯಾಂಕರ್ ನೀರನ್ನೇ ಅವಲಂಬಿಸಿದ್ದೇವೆ. ಕಾವೇರಿ 5ನೇ ಹಂತದ ಯೋಜನೆ ಆರಂಭವಾದ ಕೂಡಲೇ, ನಾವೆಲ್ಲ ನೀರಿನ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿ, ಸಾವಿರಾರು ರೂಪಾಯಿ ಶುಲ್ಕ ಪಾವತಿಸಿದ್ದೇವೆ. ನೀರೇ ಬರುತ್ತಿಲ್ಲ. ಸಮಸ್ಯೆ ಪರಿಹಾರಕ್ಕೆ ಯಾರನ್ನು ಸಂಪರ್ಕಿಸಬೇಕೆಂದು ತಿಳಿಯುತ್ತಿಲ್ಲ’ ಎಂದು ಮತ್ತೊಬ್ಬ ನಿವಾಸಿ ಧ್ರುವ ಬೇಸರ ವ್ಯಕ್ತಪಡಿಸಿದರು.
‘ಈ ಭಾಗಕ್ಕೆ ಕಾವೇರಿ ನೀರು ಸರಬರಾಜು ಮಾಡಬೇಕಾದರೆ 80 ಅಡಿ ಮುಖ್ಯ ರಸ್ತೆಯಲ್ಲಿ ಎರಡು ಕೊಳವೆಗಳನ್ನು ಅಳವಡಿಸಬೇಕು. ಅದಕ್ಕೆ ಬೇರೆ ಇಲಾಖೆಯಿಂದ ಅನುಮತಿ ಪಡೆಯಬೇಕಂತೆ. ಶುಲ್ಕ ಪಾವತಿಸಬೇಕಂತೆ. ಹೀಗೆ ಹಲವು ಕಾರಣಗಳನ್ನು ಹೇಳುತ್ತಾ, ನೀರಿನ ಸಂಪರ್ಕ ನೀಡುವುದಕ್ಕೆ ವಿಳಂಬ ಮಾಡುತ್ತಿದ್ದಾರೆ’ ಎಂದು ನಿವಾಸಿಗಳು ದೂರಿದರು.
‘ನೀರಿನ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸುವಾಗ, ಶುಲ್ಕ ಪಾವತಿಸುವಾಗ, ಮನೆಗಳಿಗೆ ಕೊಳವೆಗಳನ್ನು ಅಳವಡಿಸುವಾಗ ಏನೂ ಹೇಳದವರು, ಈಗ ಅಡಚಣೆಗಳ ಬಗ್ಗೆ ಹೇಳಿದರೆ ಹೇಗೆ’ ಎಂಬುದು ಅವರ ಪ್ರಶ್ನೆ.
‘ಇದೇ ಭಾಗದಲ್ಲಿರುವ ದೊಡ್ಡ ದೊಡ್ಡ ಅಂಗಡಿಗಳಿಗೆ, ಹೋಟೆಲ್ಗಳಿಗೆ ರಾತ್ರೋ ರಾತ್ರಿ ಕೊಳವೆಗಳನ್ನು ಅಳವಡಿಸಿ ನೀರು ಕೊಡುವುದಕ್ಕಾಗುತ್ತದೆ. ಆದರೆ, ನಮ್ಮ ಮನೆಗಳಿಗೆ ನೀರಿನ ಸಂಪರ್ಕ ಕೊಡುವುದಕ್ಕೆ ಯಾಕೆ ಆಗುತ್ತಿಲ್ಲ’ ಎಂದು ನಿವಾಸಿಗಳು ಪ್ರಶ್ನಿಸುತ್ತಾರೆ.
* ಶುಲ್ಕ ಪಾವತಿಸಿ ವರ್ಷ ಕಳೆದರೂ ನೀರಿಲ್ಲ
* ಮನವಿ ಮಾಡಿಯಾಗಿದೆ, ದೂರೂ ನೀಡಿದ್ದೇವೆ
* ‘ನೀರು ಪೂರೈಸಿ, ಟ್ಯಾಂಕರ್ ವೆಚ್ಚದ ಹೊರೆ ತಪ್ಪಿಸಿ’
ಸುತ್ತಮುತ್ತಲಿನ ರಸ್ತೆಗಳಲ್ಲಿ ಬಡಾವಣೆಗಳಲ್ಲಿ ನೀರಿನ ಕೊಳವೆಗಳನ್ನು ಅಳವಡಿಸಿದ್ದಾರೆ ಅಲ್ಲಿಗೆ ನೀರು ಬರುತ್ತಿದೆ. ನಮ್ಮ ರಸ್ತೆಗೆ ಕೊಳವೆ ಜೋಡಿಸಿದ್ದರೂ ನೀರು ಮಾತ್ರ ಬರುತ್ತಿಲ್ಲ– ಗೊಟ್ಟಿಗೆರೆ ನಿವಾಸಿಗಳು
ಎಲ್ಲ ಬಡಾವಣೆಗಳಿಗೂ ಹಂತ ಹಂತವಾಗಿ ಕಾವೇರಿ ನೀರಿನ ಸಂಪರ್ಕ ನೀಡಲಾಗುತ್ತಿದೆ. ಈ ಬಡಾವಣೆಯಲ್ಲಿ ನೀರು ಪೂರೈಕೆ ಯಾವ ಸ್ಥಿತಿಯಲ್ಲಿದೆ ಎಂದು ತಿಳಿದು ಕ್ರಮ ಕೈಗೊಳ್ಳಲಾಗುತ್ತದೆ.–ಜಲಮಂಡಳಿ ಅಧಿಕಾರಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.