ಬೆಂಗಳೂರು: 2019ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಿದ್ಧತೆ ಆರಂಭಿಸಿರುವ ಬಿಬಿಎಂಪಿ, ನೆನಪಿನ ಕಾಣಿಕೆಗೆ ಅಲ್ಪಾವಧಿ ಟೆಂಡರ್ ಕರೆದಿದೆ.
ಪ್ರಶಸ್ತಿ ಪ್ರದಾನವು ಸಾರ್ವಜನಿಕರ ವ್ಯಾಪಕ ಟೀಕೆಗೆ ಗುರಿಯಾದ ನಂತರ ಅದರ ಸಂಖ್ಯೆಯನ್ನು ಕಡಿಮೆ
ಮಾಡಿ ಮೌಲ್ಯ ಹೆಚ್ಚಿಸಲು ಬಿಬಿಎಂಪಿ ಆಲೋಚಿಸಿದೆ. ಕುದುರೆ ಮೇಲೆ ಕತ್ತಿ ಹಿಡಿದು ಕುಳಿತಿರುವ ಕೆಂಪೇಗೌಡರ ಪ್ರತಿಮೆ ಒಳಗೊಂಡ 75 ನೆನಪಿನ ಕಾಣಿಕೆಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ.
‘ಆಗಸ್ಟ್ ಮೊದಲ ವಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸುವ ಆಲೋಚನೆ ಇದೆ.ಪ್ರಶಸ್ತಿ ಪುರಸ್ಕೃತರ ಸಂಖ್ಯೆ ಕಳೆದ ವರ್ಷಕ್ಕಿಂತ ಕಡಿಮೆಯಾಗುವ ನಿರೀಕ್ಷೆ ಇದೆ’ ಎಂದು ಮೇಯರ್ ಗಂಗಾಂಬಿಕೆ ಹೇಳಿದರು.
ಸೆಪ್ಟೆಂಬರ್ ಅಂತ್ಯಕ್ಕೆಮೇಯರ್ ಅವಧಿ ಪೂರ್ಣಗೊಳ್ಳಲಿದೆ. ಹೀಗಾಗಿ, ಆಗಸ್ಟ್ ಮೊದಲ ವಾರದಲ್ಲೇ ಕಾರ್ಯಕ್ರಮ ಆಯೋಜಿಸಲು ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆ. ಹೊಸ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರು ನೇಮಕವಾದ ನಂತರ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ. ಪ್ರಶಸ್ತಿ ಪಟ್ಟಿ ಅಂತಿಮಗೊಂಡ ನಂತರ ನೆನಪಿನ ಕಾಣಿಕೆ ಸಂಖ್ಯೆಯೂ ಹೆಚ್ಚಳವಾಗಬಹುದು ಎಂದು ಬಿಬಿಎಂಪಿ ಮೂಲಗಳು ಹೇಳಿವೆ. ಕಳೆದ ವರ್ಷ 530 ಜನರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲಾಗಿತ್ತು. ಪ್ರಶಸ್ತಿ ಪುರಸ್ಕೃತರಿಗೆ ತಲಾ ₹9 ಸಾವಿರದಂತೆ ಒಟ್ಟು ₹4.82 ಕೋಟಿಯನ್ನು ಇದಕ್ಕಾಗಿ ಖರ್ಚು ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.