ADVERTISEMENT

ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ ಗುಣಮಟ್ಟ ಪರಿಶೀಲನೆ: ಐಐಎಸ್‌ಸಿಗೆ ಬಿಡಿಎ ಪತ್ರ

ಕೆಂಪೇಗೌಡ ಬಡಾವಣೆಯಲ್ಲಿ ಕಳಪೆ ರಸ್ತೆ: ನಿವೇಶನದಾರ ಆರೋಪ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 16:15 IST
Last Updated 8 ಜನವರಿ 2026, 16:15 IST
ಕೆಂಪೇಗೌಡ ಬಡಾವಣೆಯ ಮೂರನೇ ಬ್ಲಾಕ್‌ನ ರಸ್ತೆಯೊಂದರಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ ನೆಲಮಟ್ಟದಿಂದ ಮೇಲೆ ಬರುವಂತೆ ನಿರ್ಮಿಸಲಾಗಿದೆ.
ಕೆಂಪೇಗೌಡ ಬಡಾವಣೆಯ ಮೂರನೇ ಬ್ಲಾಕ್‌ನ ರಸ್ತೆಯೊಂದರಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ ನೆಲಮಟ್ಟದಿಂದ ಮೇಲೆ ಬರುವಂತೆ ನಿರ್ಮಿಸಲಾಗಿದೆ.   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯ ರಸ್ತೆಗಳ ಗುಣಮಟ್ಟ ಪರಿಶೀಲನೆಗಾಗಿ ಐಐಎಸ್‌ಸಿಗೆ ಪತ್ರ ಬರೆಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧರಿಸಿದೆ.

ಪ್ರಾಧಿಕಾರ ನಿರ್ಮಿಸುತ್ತಿರುವ ಕೆಂಪೇಗೌಡ ಬಡಾವಣೆಯಲ್ಲಿ ಶೇಕಡ 80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಕೆಲಸಗಳು ತ್ವರಿತವಾಗಿ ನಡೆಯುತ್ತಿವೆ. ರಸ್ತೆ ಗುಣಮಟ್ಟಕ್ಕೆ ಸಂಬಂಧಿಸಿದಂತೆ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಐಐಎಸ್‌ಸಿಗೆ ಪತ್ರ ಬರೆದು, ಗುಣಮಟ್ಟ ಪರೀಕ್ಷೆ ನಡೆಸಲಾಗುವುದು  ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ

‘ಬಡಾವಣೆಯಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಎಲ್ಲ ರಸ್ತೆಗಳು ಸಮತಟ್ಟಾಗಿದ್ದರೆ ಸಂಚಾರ ಸುಲಭವಾಗುತ್ತದೆ. ಆದರೆ, ಇಲ್ಲಿನ ರಸ್ತೆಗಳು ಒಂದು ಕಡೆಗೆ ಏರು ಮಾಡಿದ್ದರೆ, ಇನ್ನೊಂದು ಕಡೆಗೆ ಇಳಿಜಾರು ಮಾಡಲಾಗಿದೆ. ರಸ್ತೆ ಮೇಲೆ ನಿಲ್ಲುವ ನೀರು, ಚರಂಡಿ ಸೇರಲು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ರಸ್ತೆಗಳ ಗುಣಮಟ್ಟ ಕಳಪೆ ಆಗಿರುವುದಲ್ಲದೇ, ಏರಿಳಿತ ಮಾಡಿದ್ದರಿಂದ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ’ ಎಂದು ನಿವೇಶನದಾರರು ಆರೋಪಿಸಿದ್ದಾರೆ.

ADVERTISEMENT

‘ಒಳಚರಂಡಿ ಕಾಮಗಾರಿಯನ್ನೂ ಸಮಪರ್ಕವಾಗಿ ಪೂರ್ಣಗೊಳಿಸಿಲ್ಲ. ಇದರಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಮೂಲಸೌಕರ್ಯಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಜನರಿಗೆ ಪ್ರಯೋಜನವಾಗುತ್ತಿಲ್ಲ’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಸಂಘದ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.