ಬೆಂಗಳೂರು: ‘ನಮ್ಮ ಮೆಟ್ರೊ’ ಮೈಸೂರು ರಸ್ತೆ ವಿಸ್ತರಿತ ಮಾರ್ಗದಲ್ಲಿನ ಕೆಂಗೇರಿಯವರೆಗೆ ಮುಂದಿನ ಜೂನ್ನಿಂದ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ.
ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ‘ಈ ವರ್ಷದಲ್ಲಿ 13 ಕಿ.ಮೀ. ಮತ್ತು ಮುಂದಿನ ವರ್ಷದಲ್ಲಿ 30 ಕಿ.ಮೀ. ನಷ್ಟು ಮೆಟ್ರೊ ಜಾಲ ವಿಸ್ತರಿಸುವ ಗುರಿ ಇದೆ’ ಎಂದು ತಿಳಿಸಿದರು.
‘ಮುಂದಿನ ಒಂದು ವರ್ಷದಲ್ಲಿ ಎರಡು ಮಾರ್ಗಗಳು ಲೋಕಾರ್ಪಣೆಗೊಳ್ಳಲಿವೆ. ಏಪ್ರಿಲ್ ವೇಳೆಗೆ ಕೆಂಗೇರಿ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಯಲಿದೆ. ನಂತರ ಮೇನಲ್ಲಿ ಪರಿಶೀಲನೆಗೆ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಆಹ್ವಾನ ನೀಡಲಾಗುವುದು. ಜೂನ್ಗೆ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು. ಈ ಮಾರ್ಗದ ಕೊನೆಯ ನಿಲ್ದಾಣವಾದ ಚಲ್ಲಘಟ್ಟ ಒಂದು ಮಾತ್ರ ನಂತರದಲ್ಲಿ ಸೇರ್ಪಡೆಗೊಳ್ಳಲಿದೆ’ ಎಂದು ಹೇಳಿದರು.
‘ಅತಿ ಸಣ್ಣ ವಿಸ್ತರಿತ ಮಾರ್ಗವಾದ ತುಮಕೂರು ರಸ್ತೆಯಲ್ಲಿ ಮೂರು ನಿಲ್ದಾಣಗಳ ಪೈಕಿ ಮಂಜುನಾಥನಗರ, ಜಿಂದಾಲ್ ವರ್ಷದ ಕೊನೆಗೆ ಲೋಕಾರ್ಪಣೆ ಮಾಡುವ ಗುರಿ ಇದೆ. ಬಿಐಇಸಿ ನಂತರದಲ್ಲಿ ಸೇರ್ಪಡೆ ಆಗಲಿದೆ’ ಎಂದರು.
ಮೇಲ್ಸೇತುವೆ ಉದ್ಘಾಟನೆ
ತುಮಕೂರು ರಸ್ತೆಯ ನಾಗಸಂದ್ರ ಮೆಟ್ರೊ ನಿಲ್ದಾಣದ ಬಳಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡುವ ಮೂಲಕ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲು ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ, ಎಂ.ಜಿ. ರಸ್ತೆಯ ನಿಲ್ದಾಣದಲ್ಲಿ ಈಗಿರುವ ಪಾದಚಾರಿ ಮೇಲ್ಸೇತುವೆಯನ್ನು ಮೂಲಸೌಕರ್ಯಗಳೊಂದಿಗೆ ಮಾರ್ಪಾಡುಗೊಳಿಸಿ, ಪಾದಚಾರಿಗಳು ರಸ್ತೆ ದಾಟಲು ಉಚಿತ ಮಾರ್ಗವನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.