ADVERTISEMENT

ಪೂಜೆಯ ನೆಪದಲ್ಲಿ ಮಹಿಳೆಗೆ ಬ್ಲ್ಯಾಕ್​ಮೇಲ್, ಲೈಂಗಿಕ ಕಿರುಕುಳ: ಕೇರಳದ ಅರ್ಚಕ ಸೆರೆ

ತಲೆಮರೆಸಿಕೊಂಡಿರುವ ಆರೋಪಿಗೆ ಬೆಳ್ಳಂದೂರು ಠಾಣೆ ಪೊಲೀಸರ ಶೋಧ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 1:27 IST
Last Updated 17 ಜೂನ್ 2025, 1:27 IST
ಅರುಣ್  
ಅರುಣ್     

ಬೆಂಗಳೂರು: ಪೂಜೆಯ ನೆಪದಲ್ಲಿ ಮಹಿಳೆಯನ್ನು ಬ್ಲ್ಯಾಕ್​ಮೇಲ್ ಮಾಡಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಅಡಿ ಕೇರಳದ ಪೆರಿಂಗೋಟ್ಟುಕಾರ ದೇವಸ್ಥಾನದ ಅರ್ಚಕನನ್ನು ಬೆಳ್ಳಂದೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಟಿ.ಎ.ಅರುಣ್ (40) ಬಂಧಿತ ಅರ್ಚಕ.

ನಗರದ 38 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಅರುಣ್‍ನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಉನ್ನಿ ದಾಮೋದರನ್‌ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಸಂತ್ರಸ್ತೆಗೆ ಇಬ್ಬರು ಮಕ್ಕಳಿದ್ದಾರೆ. ಇವರ ಪತಿ, 2016ರಲ್ಲಿ ನಿಧನರಾಗಿದ್ದರು. ಸಂತ್ರಸ್ತೆಯು ನಗರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಪತಿಯ ನಿಧನದ ಬಳಿಕ ಸಂತ್ರಸ್ತೆ ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದರು. ಕೇರಳದ ಪೆರಂಗೋಟ್ಟುಕಾರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದರೆ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ವಿಚಾರವನ್ನು ತಿಳಿದುಕೊಂಡಿದ್ದರು. ಈ ಸಂಬಂಧ ಅಕ್ಕಪಕ್ಕದ ಮನೆಯವರನ್ನೂ ವಿಚಾರಿಸಿದ್ದರು. ಅದಾದ ಮೇಲೆ ಪೂಜೆಗೆಂದು ಕೇರಳಕ್ಕೆ ತೆರಳಿದ್ದರು.  ಅಲ್ಲಿಗೆ ತೆರಳಿದಾಗ ಅರ್ಚಕ ಅರುಣ್‌ನ ಪರಿಚಯವಾಗಿತ್ತು. ಸಂತ್ರಸ್ತೆ ಜೊತೆಗೆ ಅರುಣ್ ಮಾತನಾಡಿ, ‘ನಿಮ್ಮ ಸಮಸ್ಯೆ ಬಹಳ ಗಂಭೀರವಾಗಿದ್ದು, ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗವಾಗಿದೆ. ಪೂಜೆ ನಡೆಸಬೇಕಿದೆ’ ಎಂದು ಹೇಳಿದ್ದ. ‘ತನ್ನ ಬಳಿ ಅಷ್ಟೊಂದು ಹಣ ಇಲ್ಲ’ ಎಂಬುದಾಗಿ ಸಂತ್ರಸ್ತೆ ಹೇಳಿದ್ದರು. ತಾನು ವಿಡಿಯೊ ಕರೆ ಮಾಡಿದಾಗ ಅದನ್ನು ಸ್ವೀಕರಿಸುವಂತೆ ಆರೋಪಿ ಸೂಚಿಸಿದ್ದ ಎಂದು ಪೊಲೀಸರು ಹೇಳಿದರು.

‘ಬೆಂಗಳೂರಿಗೆ ಸಂತ್ರಸ್ತೆ ಬಂದ ನಂತರ ಹಲವು ಬಾರಿ ವಾಟ್ಸ್ಆ್ಯಪ್‌ ಮೂಲಕ ವಿಡಿಯೊ ಕರೆ ಮಾಡಿದ್ದ ಆರೋಪಿ, ಮಹಿಳೆಯನ್ನು ಬೆತ್ತಲಾಗುವಂತೆ ಒತ್ತಾಯಿಸಿದ್ದ. ಇದೊಂದು ಪೂಜೆ. ನಾನು ಹೇಳಿದಂತೆ ಮಾಡದೇ ಇದ್ದರೆ ಮಕ್ಕಳಿಗೆ ತೊಂದರೆ ಆಗಲಿದೆ ಎಂದು ಬೆದರಿಸಿದ್ದ. ಆರೋಪಿ ಮಾತು ನಂಬಿ ಸಂತ್ರಸ್ತೆ ನಡೆದುಕೊಂಡಾಗ ಬೆತ್ತಲೆಯ ದೃಶ್ಯಗಳನ್ನು ಆರೋಪಿ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

ಪೂಜೆಗೆ ಬರುವಂತೆ ಸೂಚನೆ: ‘ಕೆಲವು ದಿನಗಳು ಕಳೆದ ಬಳಿಕ ವಿಶೇಷ ಪೊಜೆಗೆಂದು ಕೇರಳದ ದೇವಸ್ಥಾನಕ್ಕೆ ಬರುವಂತೆ ಸಂತ್ರಸ್ತೆಗೆ ತಿಳಿಸಿದ್ದ. ಬರಲು ಸಾಧ್ಯವಿಲ್ಲ ಎಂದು ಸಂತ್ರಸ್ತೆ ಹೇಳಿದಾಗ, ಬೆತ್ತಲೆ ದೃಶ್ಯಗಳನ್ನು ರೆಕಾರ್ಡ್ ಮಾಡಿಟ್ಟುಕೊಂಡಿರುವುದಾಗಿ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದ’ ಎಂದು ಪೊಲೀಸರು ತಿಳಿಸಿದರು. 

ವಿಡಿಯೊ ಇಟ್ಟುಕೊಂಡು ಬೆದರಿಕೆ

‘ಅರ್ಚಕನ ಬ್ಲ್ಯಾಕ್‌ಮೇಲ್‌ಗೆ ಹೆದರಿ ಸಂತ್ರಸ್ತೆ ಮೇ 5ರಂದು ಮತ್ತೆ ದೇವಾಲಯಕ್ಕೆ ಹೋಗಿದ್ದರು. ಆಗ ಅರುಣ್ ಹಾಗೂ ಉನ್ನಿ ದಾಮೋದರನ್ ಭೇಟಿ ಮಾಡಿದ್ದರು. ಉನ್ನಿ ದಾಮೋದರನ್ ಸಹ ನಿಮ್ಮ ಬೆತ್ತಲೆ ವಿಡಿಯೊ ನೋಡಿದ್ದು ಆತನ ಜತೆಗೆ ಸಲುಗೆಯಿಂದ ಇರಬೇಕು ಎಂದು ಹೇಳಿದ್ದ. ನಂತರ ಅರುಣ್ ದೇವಾಲಯದ ಕೊಠಡಿಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದ. ಉನ್ನಿ ದಾಮೋದರನ್ ಕಾವಲು ಕಾಯುತ್ತಿದ್ದ. ಯಾರಿಗೂ ವಿಷಯ ತಿಳಿಸದಂತೆ ಬೆದರಿಸಿ ಕಳುಹಿಸಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ‘ಮೇ 21ರಂದು ಮತ್ತೆ ಕರೆ ಮಾಡಿದ್ದ ಆರೋಪಿ ದೇವಾಲಯಕ್ಕೆ ಬರುವಂತೆ ಸೂಚಿಸಿದ್ದ. ಹೇಳಿದಂತೆ ಕೇಳದ ಇದ್ದರೆ ಬೆತ್ತಲೆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದ. ಅಲ್ಲಿಗೆ ಸಂತ್ರಸ್ತೆ ಹೋದಾಗ ನಿರ್ಜನ ಪ್ರದೇಶಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದ’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.